May 25, 2025
sada future

ವೇಣೂರು, ಎ. 11: ಪ್ರಸಿದ್ಧ ಯಕ್ಷಗಾನ ಕಲಾವಿದರು, ದಿಗಿಣದ ರಾಜ ಎಂದೇ ಖ್ಯಾತಿಯಾಗಿರುವ ವೇಣೂರು ಸದಾಶಿವ ಕುಲಾಲ್ ಅವರ 51ರ ಯಕ್ಷಪಯಣದ ಸಂಭ್ರಮದ ಹಿನ್ನೆಲೆಯಲ್ಲಿ ಎ. 11ರಂದು ರಾತ್ರಿ 8 ಗಂಟೆಯಿಂದ ವೇಣೂರು ಮುಖ್ಯಪೇಟೆಯ ಗಾರ್ಡನ್ ವ್ಯೂ ಬಳಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.
ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ನಯ ಭಟ್ ಕಲ್ಲಡ್ಕ ಹಾಗೂ ಪ್ರಧಾನ ಭೂಮಿಕೆಯಲ್ಲಿ ಸುಪ್ರಸಿದ್ಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ದಿ. ಕೆ. ನರಸಿಂಹ ಪೈ, ದಿ. ಪಿ. ನರಸಿಂಹ ರಾವ್ ಪಂಜಾಲಬೈಲು, ದಿ. ಡಾ. ಬಿ.ಪಿ. ಇಂದ್ರ, ದಿ. ಜೋಸೆಫ್ ಮಿನೇಜಸ್ ಹಾಗೂ ವೇಣೂರು ಸುಂದರ ಆಚಾರ್ಯ ಅವರ ಸಂಸ್ಕರಣೆ ನಡೆಯಲಿದೆ.
51ನೇ ವರ್ಷದ ತಿರುಗಾಟ

ಶ್ರೀ ಹನುಮಗಿರಿ ಮೇಳದ ಕಲಾವಿದ, ತೆಂಕುತಿಟ್ಟಿನ ಅನುಭವೀ ಪುಂಡುವೇಷಧಾರಿ ಸದಾಶಿವ ಕುಲಾಲ್ ವೇಣೂರು ಅವರು ಕಳೆದ ವರ್ಷ ತಿರುಗಾಟದ ಸುವರ್ಣ ಸಂಭ್ರಮವನ್ನು ಆಚರಿದ್ದರು. ೨೦೨೨-೨೩ನೇ ಸಾಲು ಇವರ ಐವತ್ತೊಂದನೇ ತಿರುಗಾಟ. ಆಕರ್ಷಕ ರೂಪ ಮತ್ತು ಆಳಂಗವನ್ನು ಹೊಂದಿದ ಇವರು ಸ್ತ್ರೀ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಕಿರೀಟವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ರೂಪವು ದೇವರ ಕೊಡುಗೆ. ಅದರ ಜತೆಗೆ ತನ್ನ ಪ್ರತಿಭಾವ್ಯಾಪಾರದಿಂದ ಆಕರ್ಷಕವಾದ ಪ್ರವೇಶ, ಗಿರಕಿ, ಕುಣಿತಗಳಿಂದ ರಂಗದಲ್ಲಿ ಮೆರೆದ ಕಲಾವಿದರಿವರು. ಅದಕ್ಕಾಗಿ ಇವರನ್ನು ದಿಗಿಣದ ರಾಜ್ಯ ಎಂದೇ ಕರೆಯಲಾಗಿದೆ. ವೇಣೂರಿನಲ್ಲಿ ಮಕ್ಕಳಿಗೆ ಶಿಶು ಮಂದಿರದ ಮೂಲಕ ಯಕ್ಷತರಬೇತಿಯನ್ನೂ ನೀಡುತ್ತಿದ್ದಾರೆ. ವಿವಿಧ ಶಾಲೆಯ ಮಕ್ಕಳಿಗೆ ಪಾತ್ರಕ್ಕೆ ಬೇಕಾದ ಬಣ್ಣ ಹಚ್ಚುವ ಕಾರ್ಯವನ್ನೂ ಮಾಡುತ್ತಾರೆ.

ಗಡ್ಡ, ಮೀಸೆ ತಯಾರಿಕೆಯಲ್ಲೂ ನಿಪುಣರು
ಯಕ್ಷಗಾನ ವೇಷಭೂಷಣ ತಯಾರಿಕೆಯನ್ನೂ ಇವರು ಬಲ್ಲವರು. ಅದರಲ್ಲೂ ವಿಶೇಷವಾಗಿ ಬೇರೆ ಬೇರೆ ವೇಷಗಳಿಗೆ ಬೇಕಾದಂತೆ ಗಡ್ಡ ಮತ್ತು ಮೀಸೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಬಹಳಷ್ಟು ಕಲಾವಿದರು ವೇಣೂರು ಶ್ರೀ ಸದಾಶಿವ ಕುಲಾಲರು ತಯಾರಿಸಿ ಕೊಟ್ಟ ಮೀಸೆ ಗಡ್ಡಗಳನ್ನು ಉಪಯೋಗಿಸಲು ಬಯಸುತ್ತಾರೆ.

ಕಲಾಮಾತೆಯ ಸೇವೆ ಮಾಡುತ್ತಿರುವ ಸದಾಶಿವ ಕುಲಾಲರ 51ನೇ ಯಕ್ಷಪಯಣ ಕಾರ್ಯಕ್ರಮಕ್ಕೆ ಧನ ಸಹಾಯ ನೀಡಲಿಚ್ಚಿಸುವವರು ಸದಾಶಿವ ಕುಲಾಲ್ ಅವರ ವೇಣೂರು ಕೆನರಾ ಬ್ಯಾಂಕಿನ ಖಾತೆ ಸಂಖ್ಯೆ: 01502200021060, (ಐಎಫ್‌ಎಸ್‌ಸಿ ಕೋಡ್: ಸಿಎನ್‌ಆರ್‌ಬಿ 0010150) ಗೆ ಕಳುಹಿಸಿಕೊಡಬಹುದು. ಗೂಗಲ್ ಪೇ ನಂಬರ್: 9480144978 ಗೆ ಸಹಾಯಧನ ಕಳುಹಿಸಬಹುದು. ಸದಾಶಿವ ಕುಲಾಲ್ ಅವರ ಸಂಪರ್ಕ ಸಂಖ್ಯೆಗೂ 9480144978 ಸಂಪರ್ಕಿಸಬಹುದಾಗಿದೆ.  

About The Author

Leave a Reply

Your email address will not be published. Required fields are marked *

<p>You cannot copy content of this page.</p>