
ಉಡುಪಿ: ಎರಡು ತಂಡಗಳ ನಡುವೆ ಗಲಾಟೆ ನಡೆದು ಹಲ್ಲೆ ಮಾಡಿಕೊಂಡ ಘಟನೆ ಬಲಾಯಿಪಾದೆ ಬಳಿ ನಡೆದಿದೆ.
ಗರಡಿಮಜಲು ನಿವಾಸಿ ಅಭಿಷೇಕ್ ಡಿ. 25ರಂದು ಸುಧೀರ್ ಸೋನು ಮತ್ತು ರಿಯಾಜ್ ಅವರ ಜತೆ ಕಾರಿನಲ್ಲಿ ಸ್ನೇಹಿತನ ಮನೆಗೆ ಹೋಗಿ ವಾಪಸ್ ಬಲಾಯಿಪಾದೆ ಬಳಿ ಬಂದಾಗ ಅಲ್ಲಿ 5-6 ಕಾರು ನಿಂತಿತ್ತು. ಅದರಲ್ಲಿ ಹಿಂದಿನ ಕಾರಿನ ಚಾಲಕನಿಗೆ ಸುಧೀರ್ ಸೋನು ಅವರು ಕಾರನ್ನು ಸ್ವಲ್ಪ ಮುಂದೆ ತೆಗೆಯಿರಿ ಎಂದು ಕೇಳಿಕೊಂಡಾಗ ‘ತೆಗೆಯುತ್ತೇನೆ ಏನು ಅವಸರ’ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಸುಧೀರ್ ಕಾರಿನಿಂದ ಇಳಿದು ಹಿಂದಿನ ಕಾರಿನವರಿಗೆ ಮತ್ತೆ ‘ಕಾರನ್ನು ಸ್ವಲ್ಪ ಮುಂದೆ ಇಡಿ’ ಎಂದು ಕೇಳಿಕೊಂಡಾಗ ಅಲ್ಲಿದ್ದ ಕಾರಿನಿಂದ 7-8 ಜನರು ಇಳಿದು ಇವರ ಕಾರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಮೂವರಿಗೆ ಕಾಲಿನಿಂದ ತುಳಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
