
ಉಡುಪಿ: ರಾಷ್ಟ್ರೀಯಕೃತ ಬ್ಯಾಂಕ್ ಒಂದರ ಆದಿ ಉಡುಪಿ ಶಾಖೆಯ ಮ್ಯಾನೇಜರ್ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜ್ಯೋತಿ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಸೆಕ್ಷನ್ 74ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಫೆ.7ರಂದು ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸಾಲದ ವಿಷಯದ ಬಗ್ಗೆ ಚರ್ಚಿಸಬೇಕೆಂದು ಹೇಳಿ ಮ್ಯಾನೇಜರ್ ತಮ್ಮನ್ನು ಕರೆಸಿಕೊಂಡಿದ್ದರು. ನಂತರ ಕಾರಿನೊಳಗೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಘಟನೆಯಿಂದ ತಾವು ಮಾನಸಿಕವಾಗಿ ನೊಂದಿದ್ದು, ತಮ್ಮ ಘನತೆಗೆ ಧಕ್ಕೆಯುಂಟಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಈ ಮಹಿಳೆ ಬ್ಯಾಂಕಿಂಗ್ ಕೆಲಸಕ್ಕಾಗಿ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದು ಮಹಿಳಾ ಗ್ರಾಹಕರ ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ, ಬೆದರಿಕೆ ಅಥವಾ ಮಾನಹಾನಿ ಮಾಡುವ ಪ್ರಯತ್ನಗಳು ನಡೆಯದಂತೆ ರಕ್ಷಣೆ ನೀಡಬೇಕೆಂದು ಅವರು ಪೊಲೀಸ್ ಇಲಾಖೆಯನ್ನು ಕೋರಿದ್ದಾರೆ.
