
ಉಡುಪಿ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಟಾಟಾ ಏಸ್ ವಾಹನಕ್ಕೆ ಹಿಂಬದಿಗೆ ಢಿಕ್ಕಿ ಹೊಡೆದು ಮೂವರನ್ನು ಗಾಯಗೊಳಿಸಿದ ಆರೋಪಿಯ ವಿರುದ್ಧ ಉಡುಪಿ ನಗರದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸ್ಟ್ಯಾನ್ಲಿ ಎಂಬಾತ ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಇನ್ಸುಲೆಟರ್ ಲಾರಿಯನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಸಾಗಿದ್ದ ವೇಳೆ ಮುಂದುಗಡೆಯಿಂದ ಇಟ್ಟಿಗೆ ಲೋಡ್ ಮಾಡಿಕೊಂಡು ಸಾಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ವಾಹನವು ಮುಂದಕ್ಕೆ ಹೋಗಿ ಸಿಮೆಂಟ್ ಕಟ್ಟೆಗೆ ಢಿಕ್ಕಿ ಹೊಡೆದು ನಿಂತಿತ್ತು. ಘಟನೆಯಿಂದ ಟಾಟಾ ಏಸ್ ಚಾಲಕ ಸಂತೆಕಟ್ಟೆಯ ರಾಧಾಕೃಷ್ಣ ಆಚಾರ್ಯ ಹಾಗೂ ವಾಹನದಲ್ಲಿದ್ದ ಕೆಲಸಗಾರರಾದ ಪಾಪಯ್ಯ(25) ಮತ್ತು ಮಹಾಂತೇಶ್ (21) ಅವರಿಗೆ ಗಾಯವಾಗಿದೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
