
ಉಡುಪಿ: ಜೂನ್ 27 ರಂದು ರಾತ್ರಿ ವೇಳೆ ಶಿರ್ವ ಗ್ರಾಮದ ಮಟ್ಟಾರು ರಸ್ತೆಯ ಬಳಿ ಇರುವ ಶ್ರೀಮತಿ ಪವಿತ್ರ ಪೂಜಾರ್ತಿಯವರ ಮನೆಯಲ್ಲಿ ಅವರು ಮತ್ತು ಮಗ ಮಲಗಿರುವಾಗಲೇ ಕಿಟಕಿ ಹುಕ್ಸ್ ಮುರಿದು, ಬಾಗಿಲಿನ ಚಿಲಕವನ್ನು ಹುಕ್ಸ್ ನ್ನು ಕಟ್ಟಿದ ಕೋಲಿನಿಂದ ಎಳೆದು ಬಾಗಿಲು ತೆಗೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅ.ಕೃ 43/2025 ಕಲಂ 305,331(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಈಗಾಗಲೇ ಆರೋಪಿ ಇತ್ತೆ ಬರ್ಪೆ ಅಬೂಬಕರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆತನು ಈ ಪ್ರಕರಣಲ್ಲಿ ಕಳವು ಮಾಡಿರುವ ಮತ್ತು ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಕಳವು ಮಾಡಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಲು ಉಪ್ಪಳ್ಳಿಯ ಕೆ ಇ ಮೊಹಮ್ಮದ್ ಎಂಬಾತನಿಗೆ ನೀಡಿರುವ ಬಗ್ಗೆ ಪತ್ತೆ ಮಾಡಿ, ಸದ್ರಿ ಆರೋಪಿ ಕೆ ಇ ಮೊಹಮ್ಮದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಉಡುಪಿ ಜಿಲ್ಲೆಯ ಶಿರ್ವ, ಪಡುಬಿದ್ರಿ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿರುವ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸ್ವಾಧೀನಪಡಿಸಿರುವ ಚಿನ್ನದ ಗಟ್ಟಿಗಳ ಒಟ್ಟು ತೂಕ 182 ಗ್ರಾಂ ಆಗಿರುತ್ತದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಸುಧಾಕರ ಎಸ್ ನಾಯ್ಕ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾರವರ ನೇತೃತ್ವದಲ್ಲಿ, ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಎಸ್ ಮಾನೆ ರವರ ನೇತತೃತ್ವದ ತಂಡ ಪತ್ತೆಕಾರ್ಯಾಚರಣೆ ನಡೆಸಿ ಈ ಹಿಂದೆ ದಸ್ತಗಿರಿ ಮಾಡಿದ ಆರೋಪಿ ಇತ್ತೆ ಬರ್ಪೆ ಅಬೂಬಕರ್ ಮತ್ತು ಸದ್ರಿ ಆರೋಪಿ ಕೆ ಇ ಮೊಹಮ್ಮದ್ ರವರಿಂದ ಒಟ್ಟು 248.760 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದು ಅವುಗಳ ಮೌಲ್ಯ ರೂ. 22,32,000/-
ಈ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಎಸ್ ಮಾನೆ ರವರ ಜೊತೆ ಶಿರ್ವ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ. ಮಂಜುನಾಥ ಮರಬದ, ಶ್ರೀ. ಲೋಹಿತ್ ಕುಮಾರ್ ಸಿ.ಎಸ್, ಪಡುಬಿದ್ರೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ. ಅನಿಲ್ ಕುಮಾರ್ ಟಿ ನಾಯ್ಕ, ಮತ್ತು ಸಿಬ್ಬಂದಿಯವರಾದ ಮಂಜುನಾಥ ಅಡಿಗ, ಅನ್ವರ್ ಆಲಿ, ಸಿದ್ದರಾಯಪ್ಪ, ಕಿರಣ್, ಮಂಜುನಾಥ ಹೊಸಮನಿ, ಬಸವರಾಜ್, ಶ್ರೀಧರ್ ಶೆಟ್ಟಿಗಾರ್ ಹಾಗೂ ವೃತ್ತ ಕಛೇರಿಯ ಸಿಬ್ಬಂದಿಯವರಾದ ರಿಯಾಜ್ ಅಹ್ಮದ್, ಶರಣಪ್ಪ, ಜೀವನ್, ಪಾವನಾಂಗಿ, ದಿನೇಶ್ ಮತ್ತು ಜೀಪು ಚಾಲಕರಾದ ಜಗದೀಶ್, ಪ್ರಕಾಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ರವರು ಹಾಗೂ ಅಜೆಕಾರು ಠಾಣೆಯ ಭೀಮಪ್ಪರವರು ಭಾಗವಹಿಸಿರುತ್ತಾರೆ.
