

ಮೈಸೂರು : ಮಂಗಳೂರು ಬಾಂಬ್ ಸ್ಪೋಟದ ಕುರಿತು ರಾಷ್ಟ್ರೀಯ ತನಿಖಾದಳ ಮೈಸೂರಿನಲ್ಲಿ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.
ಮಂಗಳೂರಿನ ಕಂಕನಾಡಿಯ ಗರೋಡಿ ಬಳಿ ಕಳೆದ ನ. 19ರಂದು ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ತನಿಖೆಗೆ ಸಂಬಂಧಿಸಿ ಎನ್ಐಎ ಮೈಸೂರಿನಲ್ಲಿ ಶೋಧ ಕಾರ್ಯ ನಡೆಸಿದರು. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಯಾಗಿರುವ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಸ್ಫೋಟ ನಡೆಯುವ ಮೊದಲು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲಿ ಮೊಬೈಲ್ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ಪಡೆದಿದ್ದ. ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಅಲ್ಲಿ ವಾಸ್ತವ್ಯ ಮಾಡಿದ್ದ ಹಿನ್ನೆಲೆಯಲ್ಲಿ ಎನ್ಐಎ ಮೈಸೂರಿನಲ್ಲಿ ಶೋಧ ನಡೆಸಿದ್ದು ಕೆಲವು ಪರಿಕರ, ದಾಖಲೆ ಪತ್ರ, ನಗದನ್ನು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ನ. 19ರಂದು ಸಂಜೆ ಶಾರೀಕ್ ನಾಗುರಿ ಬಳಿ ಆಟೋರಿಕ್ಷಾ ಹತ್ತಿ ತನ್ನನ್ನು ಪಂಪ್ವೆಲ್ಗೆ ಬಿಡುವಂತೆ ಹೇಳಿದ್ದ. ಅದರಂತೆ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಆಟೋವನ್ನು ಪಂಪ್ವೆಲ್ನತ್ತ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಗರೋಡಿ ದಾಟುತ್ತಿದ್ದಂತೆ ಭಾರೀ ಸ್ಫೋಟವುಂಟಾಗಿ ಶಾರೀಕ್ ಗಂಭೀರ ಗಾಯಗೊಂಡಿದ್ದ. ಪುರುಷೋತ್ತಮ ಪೂಜಾರಿ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಜ. 14ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಶಾರೀಕ್ನನ್ನು ಡಿ. 17ರಂದು ಎನ್ಐಎ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿ ವಶಕ್ಕೆ ಪಡೆದುಕೊಂಡಿತ್ತು. ನವೆಂಬರ್ 23ರಂದು ಎನ್ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿತ್ತು.