
ಉಡುಪಿಯಲ್ಲಿ ಹೊಸ ವರ್ಷ ಆಚರಣೆಯ ವೇಳೆ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತಂತೆ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ಸಭೆ ನಡೆಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ನಿರ್ದೇಶನದಂತೆ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಹರ್ಷ ಪ್ರಿಯಂವದ ಅವರು ಹೊಸ ವರ್ಷ ಅಚರಣೆಯ ಸಮಯ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ರೆಸಾರ್ಟ್ ಹೋಟೆಲ್ ಮಾಲಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.
1)ಉಡುಪಿ ಜಿಲ್ಲೆಯ ಎಲ್ಲಾ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಮಾಲಕರು ಹೊಸ ವರ್ಷಾಚರಣೆಯ ವೇಳೆ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10:00 ಗಂಟೆಯೊಳಗೆ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಹಾಗೂ ನಿಗದಿತ ಸಮಯದೊಳಗೆ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಯಿತು. 2)ಫೈರ್ ಕ್ಯಾಂಪ್ಗಳಿಂದ/ಅಬ್ಬರದ ಸಂಗೀತಗಳಿಂದ ನೆರೆಹೊರೆಯವರ ಶಾಂತಿ ಭಂಗವುಂಟು ಮಾಡುವಂತಿಲ್ಲ. 3) ಹೋಮ್ ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು. 4) ಹೋಂಸ್ಟೇ/ರೆಸಾರ್ಟ್ಗಳಲ್ಲಿ ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯತಕ್ಕದ್ದು. 5) ಪೊಲೀಸರಿಂದ/ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿಯನ್ನು ಪಡೆಯದೇ ನಿರ್ಜನ ಪ್ರದೇಶ/ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್ ಸ್ಟೇ ಮಾಲಿಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ. 6) ಹೋಮ್ ಸ್ಟೇಗಳಲ್ಲಿ ಅತಿಥಿಗಳ ವಾಹನಗಳನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಂ ಸ್ಟೇ ನಿರ್ವಹಿಸಿರುವ ಜಾಗದೊಳಗೆ ಪಾರ್ಕಿಂಗ್ ಮಾಡಿಸತಕ್ಕದ್ದು. 7) ಹೋಮ್ಸ್ಟೇಯಲ್ಲಿ ಕಾನೂನು ಬಾಹಿರ ಅನೈತಿಕ ಚಟುವಟಿಕೆಗಳನ್ನು ನಡೆಸಲು ಅನುವು ಮಾಡತಕ್ಕದಲ್ಲ. 8) ಹೋಂ-ಸ್ಟೇಯಲ್ಲಿನ ಎಲ್ಲಾ ಹೊರ ಆವರಣದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ಸದರಿ ಕ್ಯಾಮೆರಾದ ದೃಶಗಳನ್ನು ಕನಿಷ್ಠ ಮೂರು ತಿಂಗಳಾದರೂ ಬ್ಯಾಕ್ ಅಪ್ ಇರುವಂತೆ ಅಳವಡಿಸುವುದು. 9) ವಿದೇಶಿಯರು ಹೋಂ-ಸ್ಟೇ ಯಲ್ಲಿ ಬಂದಾಗ ಅವರ “ಸಿ” ಫಾರಂ ವಿವರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿರುವ ವಿದೇಶಿ ವಿಭಾಗಕ್ಕೆ ಸಲ್ಲಿಸಿ ಕಡ್ಡಾಯವಾಗಿ ನಮೂದು ಮಾಡಿ ಸರಹದ್ದಿನ ಠಾಣೆಗೆ ಮಾಹಿತಿ ನೀಡುವುದು. 10) ಹೋಂ-ಸ್ಟೇ ಯಲ್ಲಿ ಬರುವ ಅತಿಥಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಹನ ನೊಂದಾಣಿ ಸಂಖ್ಯೆ, ಆಧಾರ್ ಕಾರ್ಡ್ ಗುರುತು ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ನೊಂದಾವಣಿಯನ್ನು ತೆರೆಯುವುದು. 11) ಹೊಸ ವರ್ಷ ಆಚರಣೆ ಬಗ್ಗೆ ಧ್ವನಿವರ್ಧಕ ಬಳಸುವ ಬಗ್ಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವುದು. 12) ಹೋಂಸ್ಟೇ/ರೆಸಾರ್ಟ್ಗಳಲ್ಲಿ ಯಾವುದೇ ಜಾತಿ ಧರ್ಮಗಳ ಅವಹೇಳನ ಮಾಡುವಂತ ಕಾರ್ಯಕ್ರಮ ನಡೆಸತಕ್ಕದಲ್ಲ. 13) ಹೋಂ ಸ್ಟೇಯಲ್ಲಿ ಬರುವ ಅಥಿತಿಗಳು ಮಧ್ಯಪಾನ ಮಾಡಿ ಇತರರಿಗೆ ತೊಂದರೆ ನೀಡಿ ಅನವಶ್ಯಕ ಘಟನೆಗಳು ನಡೆಯದಂತೆ ಸೂಕ್ತ ಮುನ್ನಚ್ಚರಿಕೆ ವಹಿಸುವುದು. 14) ಹೋಂಸ್ಟೇ/ರೆಸಾರ್ಟ್ಗಳಲ್ಲಿ ನಿಗದಿ ಪಡಿಸಿದ ಸಮಯದೊಳಗೆ ಕಾರ್ಯಕ್ರಮವನ್ನು ಮುಗಿಸಿ ಶಾಂತಿ ಭಂಗವುಂಟಾಗದಂತೆ ಇಲಾಖೆಯೊಂದಿಗೆ ಸಹಕರಿಸುವುದು. 15) ವಿದೇಶಿಗರು ಕೆಲಸ ಅಥವಾ ಇನ್ನಿತರ ಯಾವುದೇ ಕಾರಣಗಳಿಂದ ಬಂದಲ್ಲಿ ಕೂಡಲೇ ಮಾಹಿತಿ ನೀಡುವುದು. 16) ಹೋಂಸ್ಟೇ/ರೆಸಾರ್ಟ್ಗಳಲ್ಲಿ ಮದ್ಯಪಾನ ವಿತರಿಸಲು ಕಡ್ಡಾಯವಾಗಿ ಅಬಕಾರಿ ಇಲಾಖೆಯ ಅನುಮತಿಯನ್ನು ಪಡೆಯುವುದು. 17) ಹೋಂಸ್ಟೇ/ರೆಸಾರ್ಟ್ಗಳಲ್ಲಿ ಯಾವುದೇ ರೀತಿ ಗಾಂಜ/ಅಫೀಮು ಇನ್ನಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡತಕ್ಕದಲ್ಲ . 18) ಹೋಂಸ್ಟೇ/ರೆಸಾರ್ಟ್ಗಳಲ್ಲಿ ಇನ್ನಿತರ ಕಡೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟವರೇ ಜವಾಬ್ದಾರರಾಗಿರುತ್ತಾರೆ. ಆದುದರಿಂದ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಮುಂತಾದ ಸೂಚನೆಗಳನ್ನು ನೀಡಿದ್ದಾರೆ. ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಸೆನ್ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ಹಾಜರಿದ್ದರು.
