ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ 10 ನೇ ದಿನವೂ ಕಾರ್ಯಾಚರಣೆ ಮುಂದುವೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಮೊಬೈಲ್ ಸ್ವಿಚ್ ಆನ್ ಆಗಿರುವ ಕೇರಳದ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆ ಇಂದು ಮುಂಜಾನೆಯಿಂದಲೇ ಆರಂಭವಾಗಿದೆ. ಈಗಾಗಲೇ ನದಿಯ ಒಳಗಡೆ ಪತ್ತೆಯಾಗಿರುವ ಟ್ರಕ್ ಅನ್ನು ಮೇಲೆತ್ತಲು ಸೇನೆಯ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಮೂಲತಾ ಕೇರಳದವರಾದ ಮೇಜರ್ ಎಂ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಇಂದಿನ ಕಾರ್ಯಾಚರಣೆ ಬೆಳಗ್ಗೆ 7.30ಕ್ಕೆ ಆರಂಭಿಸಲಾಗಿದೆ.ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ಹೊರತು ಪಡಿಸಿ ಉಳಿದವರಿಗೆ ನಿಷೇಧಿಸಲಾಗಿದೆ. ಕೇರಳ ಮೂಲದ ಅರ್ಜುನ್ ಓಡಿಸುತ್ತಿದ್ದ ಭಾರತ್ ಬೆಂಜ್ ಟ್ರಕ್ ಗಂಗಾವಳಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿತ್ತು. ಈ ಟ್ರಕ್ನೊಳಗೆ ಅರ್ಜುನ್ ಇದ್ದಾನೆಯೇ ಎಂಬುದನ್ನು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಟ್ರಕ್ ದಡದಿಂದ 20 ಮೀಟರ್ ದೂರದಲ್ಲಿ ನದಿಯಲ್ಲಿ 15 ಮೀಟರ್ ಆಳದಲ್ಲಿದೆ ಎನ್ನಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಮೊದಲ ಹಂತವೆಂದರೆ ಮಣ್ಣನ್ನು ತೆಗೆದುಹಾಕುವುದು. ಮಣ್ಣು ಸರಿಸಲು ಬೃಹತ್ ಪೊಕ್ಲೇನ್ ಯಂತ್ರ ತರಿಸಲಾಗಿದೆ. ನೌಕಾಪಡೆಯ ಡೈವರ್ಗಳನ್ನು ಸ್ಥಳದಲ್ಲಿನ ನಿಯೋಜಿಸಲಾಗಿದೆ. ಕೆಸರುಮಯ ನದಿಪಾತ್ರದಲ್ಲಿ ಕಾರ್ಯಾಚರಣೆ ಸೇನಾಪಡೆಗೆ ಸವಾಲಾಗಿದೆ. ಒಂದು ವೇಳೆ ನಾಪತ್ತೆಯಾಗಿರುವ ಚಾಲಕ ಅರ್ಜುನ್ ಸೇರಿದಂತೆ ಇತರೆ ಮೂವರ ಶವ ಇಂದು ದೊರೆತಲ್ಲಿ ಇಂದಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.