
ನವದೆಹಲಿ: ಶಬರಿಮಲೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಇದೀಗ ಸುಪ್ರೀಂಕೋರ್ಟ್ ನಲ್ಲಿರುವ ಮರುಪರಿಶೀಲನಾ ಅರ್ಜಿಯನ್ನು 9 ನ್ಯಾಯಾಧೀಶರ ಪೀಠ ಎಪ್ರಿಲ್ 7 ರಿಂದ ವಿಚಾರಣೆ ಪ್ರಾರಂಭಿಸಲಿದೆ.
ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ಇಂದು 9 ನ್ಯಾಯಾಧೀಶರ ಪೀಠದ ಮುಂದೆ ಉಲ್ಲೇಖದ ಪಟ್ಟಿಗೆ ಆದೇಶಗಳನ್ನು ಅಂಗೀಕರಿಸಿತು. 9 ನ್ಯಾಯಾಧೀಶರ ಪೀಠದ ಸಂಯೋಜನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳು ಆಡಳಿತಾತ್ಮಕ ಆದೇಶದ ಮೂಲಕ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುತ್ತದೆ.
ಇನ್ನು ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆಯನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ವಾದ ಮಂಡಿಸಲಿವೆ. ಪುನರ್ ಪರಿಶೀಲನೆಯನ್ನು ವಿರೋಧಿಸುವ ಪಕ್ಷಗಳಿಗೆ ಏಪ್ರಿಲ್ 14 ರಿಂದ 16 ರವರೆಗೆ ವಾದ ಮಂಡಿಸಲು ದಿನಾಂಕಗಳನ್ನು ನೀಡಲಾಗಿದೆ. ಮರುಪ್ರತ್ಯಾರೋಪ ಸಲ್ಲಿಕೆಗಳು ಏಪ್ರಿಲ್ 21 ರಂದು ನಡೆಯಲಿದ್ದು, ವಿಚಾರಣೆಗಳು ಏಪ್ರಿಲ್ 22 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
2018 ಸೆಪ್ಟೆಂಬರ್ ನಲ್ಲಿ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂನ ಐದು ನ್ಯಾಯಾಧೀಶರ ಪೀಠವು ತೀರ್ಪು ನೀಡಿತ್ತು. ಆದರೆ ಇವರಲ್ಲಿ ಇಂದೂ ಮಲ್ಹೋತ್ರಾ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಕೆಲ ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ.
ಇದರೊಂದಿಗೆ ದರ್ಗಾ ಅಥವಾ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಅಲ್ಲದವರನ್ನ ವಿವಾಹವಾಗಿದ್ದರೆ ಅಗ್ನಿ ದೇವಾಲಯಗಳಿಗೆ ಪಾರ್ಸಿ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದವರಲ್ಲಿ ಬಹಿಷ್ಕಾರ ಮತ್ತು ಸ್ತ್ರೀ ಜನನಾಂಗ ಛೇದನದ ಪದ್ಧತಿಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ.
ಇನ್ನೂ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಬೆಂಬಲ ನೀಡಿದೆ. ಆದ್ರೆ ನಿರ್ಬಂಧವನ್ನ ಕೇಂದ್ರ ಸರ್ಕಾರ ಬೆಂಬಲಿಸಿದೆ.
