![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ನಾಗರ ಹಾವನ್ನ ಕುಲ ದೇವತೆ ಎಂದು ಪರಿಗಣಿಸಿ, ಪೂಜಿಸುತ್ತಾರೆ. ಪ್ರತಿಯೊಂದು ದೇವಾಲಯವೂ ನಾಗದೇವತೆಯ ವಿಗ್ರಹಗಳನ್ನ ಹೊಂದಿರಬೇಕು ಎನ್ನುವ ನಿಯಮವಿದೆ. ಆದ್ರೆ, ಕರೀಂನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಯೊಂದು ಸ್ಥಳೀಯರಲ್ಲಿ ಭಯ ಹುಟ್ಟಿಸುತ್ತಿದೆ.
ಕರೀಂನಗರ ಜಿಲ್ಲೆಯ ಸೈದಾಬಾದ್ ಮಂಡಲದ ಯುವತಿಯೊಬ್ಬಳು ನಾಗಕನ್ಯೆ ಎಂದು ಹೇಳಿಕೊಂಡಿದ್ದು ಸ್ಥಳೀಯವಾಗಿ ಮಾತ್ರವಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದಾಳೆ. ಅಂದ್ಹಾಗೆ, ಎಗ್ಲಾಸ್ಪುರದ ಕೃಷ್ಣವೇಣಿ ಎಂಬ ಈ ಯುವತಿ, ಪದವಿ ಮುಗಿಸಿದ್ದು, ಕೆಲ ಕಾಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಪಾಠ ಮಾಡಿದ್ದಾಳೆ. ಇತ್ತೀಚೆಗಷ್ಟೇ ಕೃಷ್ಣವೇಣಿ ಅವರ ಪೋಷಕರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರಿಂದಾಗಿ ಆಕೆ ಕೆಲಕಾಲ ಖಿನ್ನತೆಗೆ ಒಳಗಾಗಿದ್ದಳು. ಯುವತಿ ಸಧ್ಯ ತನ್ನ ಅಜ್ಜಿಯೊಂದಿಗೆ ವಾಸವಿದ್ದು, ನಾಲ್ಕು ವರ್ಷಗಳ ಹಿಂದೆ ನಾಗಕನ್ಯೆಯಾಗಿ ಬದಲಾದೆ ಎನ್ನುತ್ತಾಳೆ.
ಪ್ರತಿದಿನ ಗ್ರಾಮದ ಹೊರವಲಯದಲ್ಲಿರುವ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುವ ಯುವತಿ, ಅಲ್ಲಿ ನಾಗರ ಹಾವಿನಂತೆ ಕುಣಿಯುತ್ತಾಳೆ. ಇದನ್ನ ನೋಡಿದ ಗ್ರಾಮಸ್ಥರು ಹೆದರುತ್ತಿದ್ದಾರೆ. ಇನ್ನು ಪ್ರತಿ ದಿನ ಕನಸಿನಲ್ಲಿ ಹಾವುಗಳು ಬರುತ್ತವೆ, ಗ್ರಾಮದ ಹೊರವಲಯದಲ್ಲಿರುವ ನಾಗದೇವತೆಯ ದೇವಸ್ಥಾನ ಪಾಳು ಬಿದ್ದಿದ್ದು, ಕೂಡಲೇ ಅಲ್ಲಿ ದೇವಸ್ಥಾನ ನಿರ್ಮಿಸಿ, ಆಗ ಮಾತ್ರ ತನ್ನಲ್ಲಿರುವ ನಾಗದೇವತೆ ತನ್ನನ್ನ ಬಿಟ್ಟು ಹೋಗುತ್ತಾಳೆ ಎಂದು ಯುವತಿ ಗ್ರಾಮಸ್ಥರಿಗೆ ಹೇಳಿದ್ದಾಳೆ. ಕೆಲವರು ಕೃಷ್ಣವೇಣಿಯ ಮಾತಿಗೆ ಹೆದರಿದರೆ, ಇನ್ನು ಕೆಲವರು ಆಕೆ ನಿಜವಾಗಿಯೂ ನಾಗದೇವತೆ ವರವನ್ನ ಪಡೆದಿದ್ದಾಳೆ ಎನ್ನುತ್ತಾರೆ.
ಗ್ರಾಮದ ಇನ್ನು ಕೆಲವರು ಯುವತಿ ಮಾನಸಿಕ ಸ್ಥಿತಿಯಿಂದ ವಿಚಿತ್ರವಾಗಿ ವರ್ತಿಸುತ್ತಿದ್ದು, ಹೆತ್ತವರ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನುತ್ತಿದ್ದಾರೆ. ಅದೇನೇ ಇರಲಿ, ಈ ಕುರಿತ ಸುದ್ದಿ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.