
ಉಡುಪಿ: ಅಂಬೇಡ್ಕರ್ ಯುವ ಸೇನೆ ಉಡುಪಿಯಲ್ಲಿ ಅಕ್ಟೋಬರ್ 15ರಂದು ನಡೆಸಲು ಉದ್ದೇಶಿಸಿರುವ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬವಾದ ಮಹಿಷಾ ದಸರಾಕ್ಕೆ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯ ನೆಪವೊಡ್ಡಿ ಪೊಲೀಸರು ಅನುಮತಿ ನಿರಾಕರಿಸಿರುವುದು ಸಂವಿಧಾನದ ಮೇಲೆ ಅತ್ಯಾಚಾರ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನದ ಅನುಛೇದ 25ರ ಪ್ರಕಾರ ಧರ್ಮ ಪ್ರಚಾರ ಮತ್ತು ಪಾಲನೆಗೆ ಸ್ವತಂತ್ರ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಜೆಗೆಳಿಗೆ ತನ್ನ 18(1)(ಎ)ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಕೊಟ್ಟಿದೆ. ಆದರೂ ಉಡುಪಿ ನಗರ ಠಾಣಾಧಿಕಾರಿ ಮಹಿಷಾ ದಸರಾದ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಸಲು ಅನುಮತಿ ನಿರಾಕರಿಸಿರುವುದು ಪ್ರಜಾಪುತ್ವದ ಕಗ್ಗೋಲೆ ಎಂದಿದ್ದಾರೆ. ದಲಿತರ ಅಸ್ಮಿತೆಯಾಗಿರುವ ಮಹಿಷಾ ದಸರಾಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವವರನ್ನು ಬಂಧಿಸುವುದನ್ನು ಬಿಟ್ಟು ಸಂವಿಧಾನಬದ್ಧ ದಲಿತರ ಹಕ್ಕನ್ನೇ ಹೊಸಕಿ ಹಾಕಿರುವ ಪೊಲೀಸರ ವರ್ತನೆ ಭಯೋತ್ಪಾದಕರಿಗಿಂತ ಮಿಗಿಲಾಗಿದೆ ಎಂದು ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಉಗ್ರರ ಬೆದರಿಕೆ ಬಂದರೆ ಉಗ್ರರನ್ನು ಮಟ್ಟ ಹಾಕುತ್ತಾರೋ ಇಲ್ಲ ಪರ್ಯಾಯ ಮಹೋತ್ಸವವನ್ನು ನಿಲ್ಲಿಸುವಿರೋ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ. ನಾವು ಅಂಬೇಡ್ಕರ್ ಬರೆದ ಸಂವಿಧಾನವನ್ನು ಗೌರವಿಸುವವರು ಕಾನೂನನ್ನು ಎಂದೂ ಕೈಗೆತ್ತಿಕೊಂಡವರಲ್ಲ.
