March 19, 2026
WhatsApp Image 2025-07-24 at 3.43.33 PM

ನವದೆಹಲಿ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವರದಿಗಳನ್ನು ನಿರ್ಬಂಧಿಸುವಂತೆ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿ ಪೀಠವು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ದೇವಾಲಯದ ಆಡಳಿತ ಮಂಡಳಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ಮುಕುಲ್ ರೊಹಟಗಿ, ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನ ಪ್ರಕಟಿಸುತ್ತಿವೆ ಎಂದ ಅವರು, ಮಾನಹಾನಿಕರ ಎಂದು ಹೇಳಲಾದ ಇಂಟರ್ನೆಟ್ ಮೀಮ್ಸ್‌ಗಳ ಪೋಸ್ಟ್‌ಗಳ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಇಂತಹ ಮಾನಹಾನಿಕರ ಪೋಸ್ಟ್‌ಗಳಿಗೆ ದೇವಾಲಯವು ಯಾವಾಗಲೂ ಪರಿಹಾರ ಪಡೆಯಬಹುದು. ಆದಾಗ್ಯೂ, ಮಾಧ್ಯಮಗಳ ವಿರುದ್ಧ ನಿಗ್ರಹ ಹೇರಬೇಕೇ ಅಂತ ಪ್ರಶ್ನಿಸಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ‍್ಯವನ್ನ ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದ್ರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದು ಎಂದು ನ್ಯಾಯಮೂರ್ತಿ ಮನಮೋಹನ್ ತಿಳಿಸಿದರು.

ಮುಂದುವರಿದು, ಕರ್ನಾಟಕದ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿದಾರರು ಮತ್ತೆ ವಾದ ಮಂಡಿಸಲಿ. ನಾವು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇವೆ. ವಿಚಾರಣಾ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನಂತರ ಮುಕುಲ್ ರೊಹಟಗಿ ಅವರು, ಮಧ್ಯಂತರ ರಕ್ಷಣೆ ನೀಡುವಂತೆ ನ್ಯಾಯಾಲಯವನ್ನ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ವಿಚಾರಣಾ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನದಿಂದ ಎರಡು ವಾರಗಳಲ್ಲಿ ಅರ್ಜಿಯನ್ನ ನಿರ್ಧರಿಸುವಂತೆ ನಾವು ನಿರ್ದೇಶಿಸುತ್ತೇವೆ. ಹೈಕೋರ್ಟ್ ಮಾಡುವ ಯಾವುದೇ ಅವಲೋಕನಗಳು ಹೊಸದಾಗಿ ತಡೆಯಾಜ್ಞೆ ಅರ್ಜಿಯನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿತು.

 

About The Author

Leave a Reply

Your email address will not be published. Required fields are marked *

You cannot copy content of this page.