ಸ್ನೇಹಜೀವಿ ದಿ|ಮೇಟಿ ಮುದಿಯಪ್ಪ – ಪ್ರಭಾಕರ ತುಮರಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ,ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಸಾಹಿತಿ ದಿ | ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಅವರ ಬದುಕು ಬರಹದ ಕುರಿತು ಉಪನ್ಯಾಸ ಕಾರ್ಯಕ್ರಮ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.

ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ಅವರು ನೂರಾರು ಜನರಿಗೆ ಬೇರೆ ಬೇರೆ ನೆಲೆಯಲ್ಲಿ ಉಪಕಾರ ಮಾಡಿದವರು. ವಿವಿಧ ಸಂಘ- ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದು ಮಾತ್ರವಲ್ಲದೆ, ರಂಗ ನಟರಾಗಿ ಪ್ರತಿಭೆ ತೋರಿದ್ದಾರೆ.

ಅವರದ್ದು ಸಾಮಾನ್ಯರಲ್ಲಿ ಸಾಮಾನ್ಯನಾಗುವ ಗುಣ. ಯಾವುದೇ ಅಹಂಕಾರ ಇಲ್ಲದ, ಎಲ್ಲರೊಂದಿಗೆ ಬೆರೆಯುವ ಅವರ ಆ ಗುಣವೇ ಎಲ್ಲರಿಗೂ ಅವರನ್ನು ಪ್ರಿಯವಾಗಿಸಿದೆ. ಅಲ್ಲದೆ ಉಡುಪಿಗೆ ಉತ್ತರ ಕರ್ನಾಟಕದಿಂದ ವಲಸೆ ಬಂದವರನ್ನು ಒಟ್ಟು ಸೇರಿಸಿ ಕನಕದಾಸ ಸಮಾಜ ಸೇವಾ ಸಂಘವನ್ನು ಸ್ಥಾಪಿಸಿ ಸ್ವಾಭಿಮಾನ ತುಂಬಿದವರು.

ಇನ್ನು ಕನಕದಾಸನ ಕುರಿತು ಉಡುಪಿಯಲ್ಲಿ ವಿವಾದ ಎದ್ದಾಗ ಅದನ್ನು ಅತ್ಯಂತ ಸೌಹಾರ್ಧವಾಗಿ, ಸುಖಾಂತ್ಯವಾಗಿ ಮಾಡಲು ಅದರ ನೇತೃತ್ವವನ್ನು ವಹಿಸಿದವರು. ಮೇಟಿ ಅವರು ಸ್ನೇಹಜೀವಿಯಾಗಿ ಮತ್ತು ಭಾವ ಜೀವಿಯಾಗಿ ನಮ್ಮೆಲ್ಲರ ನಡುವೆ ಇದ್ದು ಅನೇಕ ನೆನಪುಗಳನ್ನು ಇಟ್ಟು ಮರೆಯಾದವರು.

ಇವರ ಸಂಸ್ಮರಣೆಯನ್ನು ಮಾಡುತ್ತಿರುವುದು ಬಹಳ ಅರ್ಥಪೂರ್ಣ ಕಾರ್ಯ ಎಂದು ನಾಡಿನ ವಿಮರ್ಶಕ ಹಾಗೂ ಲೇಖಕರಾದ ಜಿ .ಪಿ .ಪ್ರಭಾಕರ್ ತುಮರಿಯವರು ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮಾಡುತ್ತಾ ಮಾತನಾಡಿದರು.

ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ . ನಮ್ರತಾ ಬಿ , ದ್ವಿತೀಯ ಬಹುಮಾನ ಡಾ. ಜಿ ಪಿ ನಾಗರಾಜ್ ಮೆಚ್ಚುಗೆ ಬಹುಮಾನ ಪಡೆದ ರಾಮಾಂಜಿ ನಮ್ಮಭೂಮಿ ,ಮಂಜುನಾಥ್ ಕಾರ್ತಟ್ಟು ,ಮಂಜುನಾಥ್ ಹಿಲಿಯಾಣ ಇವರಿಗೆ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಸಹಕರಿಸಿದ್ದ ಹಿರಿಯ ಸಾಹಿತಿ ಡಾ. ಜನಾರ್ದನ್ ಭಟ್ಟ ಹಾಗೂ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ಉದ್ಯಾವರ ನಾಗೇಶ್ ಕುಮಾರ್ ಇವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಇದರ ವಿಶ್ವಸ್ಥ ಹಿರಿಯಡ್ಕ ಮುರಳೀಧರ ಉಪಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ಚೋಳಯ್ಯ, ಮೇಟಿ ಮುದಿಯಪ್ಪ ಅವರ ಪುತ್ರಿ ಶಾಂತಾ ಮೇಟಿ ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಧನ್ಯವಾದ ನೀಡಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ
ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಪ್ರದರ್ಶನಗೊಂಡಿತು.

Check Also

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಲ್ಲಿ 74 ಲಕ್ಷ ವಂಚನೆ

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಂಬಿ ಮಂಗಳೂರಿನ ವ್ಯಕ್ತಿಯೊಬ್ಬ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ …

Leave a Reply

Your email address will not be published. Required fields are marked *

You cannot copy content of this page.