
ಉಡುಪಿ: ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಕಲ್ಸಂಕ ಜಂಕ್ಷನ್ ಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲಾಗಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.
ಡಿಸೆಂಬರ್ ತಿಂಗಳ ಕೊನೆಯ ವಾರದಿಂದ ಉಡುಪಿಯಲ್ಲಿ ಭಾರೀ ವಾಹನ ದಟ್ಟಣೆಯಿಂದ ಕಲ್ಸಂಕ ಭಾಗದಲ್ಲಿ ಅಂಬಾಗಿಲು ಗುಂಡಿಬೈಲು ಭಾಗದ ವಾಹನಗಳು ಕಡಿಯಾಳಿ ಭಾಗಕ್ಕೆ ಹಾಗೂ ಮಣಿಪಾಲ ಭಾಗದ ವಾಹನಗಳು ಸಿಟಿ ಬಸ್ ನಿಲ್ದಾಣದಲ್ಲಿ ಸಾಗಿ ಬರುವಂತೆ ಮಾರ್ಪಾಡು ಮಾಡಿರುವ ಬಗ್ಗೆ ಸಾರ್ವಜನಿಕರು ಬ್ಯಾರಿಕೇಡ್ ತೆರವು ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಚರ್ಚೆ ನಡೆಸಿ ಬ್ಯಾರಿಕೇಡ್ ತೆರವಿಗೆ ಕ್ರಮವಹಿಸಲಾಗಿದೆ.
ಸರಣಿ ರಜೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಉಂಟಾದ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ನಗರಸಭೆಯ ಅನುದಾನದಿಂದ ಶೀಘ್ರದಲ್ಲಿ ಕಲ್ಸಂಕದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
