
ಮಂಗಳೂರು: ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಮಂಗಳೂರು ತಾಲೂಕು ಪಂಚಾಯತ್ ವತಿಯಿಂದ ತಾಲೂಕು ಪಂಚಾಯತ್ ಆವರಣದಲ್ಲಿ ದಿನಾಂಕ 25-08-2025 ರಂದು ಗಣೇಶ ಹಬ್ಬದ ವಿಶೇಷ ಸಂಜೀವಿನಿ ಮಾಸಿಕ ಸಂತೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ್ ಕಾರ್ಬಾರಿ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದ ನಮ್ಮ ಎನ್ ಆರ್ ಎಲ್ ಎಮ್ ಸಂಜೀವಿನಿ ಒಕ್ಕೂಟದ ಸ್ತ್ರೀಯರು ಹೆಮ್ಮೆಯಿಂದ ಆಗಮಿಸಿರುತ್ತಾರೆ. ಇದು ಸಂತಸದ ವಿಷಯ. ಇನ್ನು ಮುಂದೆಯೂ ಒಕ್ಕೂಟದ ಮಹಿಳೆಯರಿಗೆ ಅವರವರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬ್ರ್ಯಾಂಡಿಂಗ್ , ಲೇಬಲ್ ಮುಂತಾದದರ ಬಗ್ಗೆ ತರಬೇತಿ ಸೇರಿದಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.


ಈ ವೇಳೆ ವೇದಿಕೆಯಲ್ಲಿ ಮೀನಾಕ್ಷಿ ಆರ್ಯ, ಸಹಾಯಕ ಆಯುಕ್ತರು, ಉಪವಿಭಾಗ ಮಂಗಳೂರು, ಜಯರಾಂ ಜಿಲ್ಲಾ ಯೋಜನಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹೇಶ್ ಕುಮಾರ್ ಹೊಳ್ಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು. ಮಹೇಶ್ ಅಂಬೆಕಲ್ ಸಹಾಯಕ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ್ ವಂದಿಸಿದರು.
