![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಂಗಳೂರು: ಟೆಂಪೋ ಢಿಕ್ಕಿ ಹೊಡೆದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿ ಮೃತಪಟ್ಟ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿದೆ.
ಮೃತರನ್ನು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್ (65) ಅವರು ಎಂದು ಗುರುತಿಸಲಾಗಿದೆ.
ಅವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃತಪಟ್ಟರು.
ಮೆಸ್ಕಾಂ ಜೆಪ್ಪು ಶಾಖೆಯ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನ ಮಂದಿರದ ಅಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ನಿವೃತ್ತ ಶಿಕ್ಷಕಿ ಗೌರಿ ರಾಧಾಕೃಷ್ಣ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.