March 19, 2026
WhatsApp Image 2025-09-13 at 9.36.55 AM

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕರ್ಣೆಯ ಪುತ್ತನಕಟ್ಟೆ ಬಳಿ ನಿನ್ನೆ ಬೆಳಗ್ಗೆ ನಡೆದ ಯುವತಿಗೆ ಯುವಕ ಚೂರಿ ಇರಿತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ರಕ್ಷಿತಾ ಪೂಜಾರಿ (24) ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟರೆ ಚಾಕುವಿನಿಂದ ಇರಿದ ಆರೋಪಿ ಕಾರ್ತಿಕ್ ಪೂಜಾರಿ (26) ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಾರ್ತಿಕ್ ಮತ್ತು ರಕ್ಷಿತಾ ಅಕ್ಕ ಪಕ್ಕದ ಮನೆಯವರು ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಒಂದೇ ಜಾತಿ ಪರಸ್ಪರ ಸಂಬಂಧಿಕರೂ ಆಗಿದ್ದರು. ಕಳೆದ ಐದು ವರ್ಷಗಳಿಂದ ಇವರ ನಡುವೆ ಪ್ರೀತಿ ಇತ್ತು. ಆತ ಆಕೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದನು. ಆದರೆ ಕಾರ್ತಿಕ್‌ಗೆ ಸರಿಯಾದ ಉದ್ಯೋಗ ಇಲ್ಲದ ಕಾರಣ ರಕ್ಷಿತಾ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ.

ಹದಿನೈದು ದಿನಗಳ ಹಿಂದೆ ಮಾತುಕತೆ ನಡೆದು ಆತನಿಂದ ಪ್ರಮಾಣ ಮಾಡಿಸಲಾಗಿತ್ತು. ಯಾವುದೇ ಕಾರಣಕ್ಕೂ ಆಕೆಯ ಬದುಕಿನಲ್ಲಿ ನಾನು ಬರಲ್ಲ, ಆಹ್ವಾನ ಕೊಟ್ಟರೆ ಮದುವೆಗೆ ಬಂದು ಊಟ ಮಾಡಿ ಹೋಗುತ್ತೇನೆ ಎಂದು ಕಾರ್ತಿಕ್ ಭರವಸೆ ನೀಡಿದ್ದ. ಮನೆಯವರ ಆಗ್ರಹದಂತೆ ರಕ್ಷಿತಾ ಆತನನ್ನು ಬ್ಲಾಕ್ ಮಾಡಿದ್ದಳು. ಆಕೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆತ ಫಾಲೋ ಮಾಡಿದ್ದಾನೆ. ಬಸ್‌ತಂಗುದಾಣ ಸಮೀಪಿಸುತ್ತಿದ್ದಂತೆ ಆತ ಆಕೆಯ ಬಳಿ ತೆರಳಿ ತನ್ನನ್ನು ಮದುವೆಯಾಗುವಂತೆ ಆತ ಪೀಡಿಸಿದ್ದಾನೆ. ಆಕೆ ನಿರಾಕರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳವಾಗಿ ಕಾರ್ತಿಕ್ ಸ್ಥಳದಲ್ಲೇ ರಕ್ಷಿತಾಳನ್ನು ಚಾಕುವಿನಿಂದ ಇರಿದಿದ್ದಾನೆ

ಗಂಭೀರ ಗಾಯಗೊಂಡ ರಕ್ಷಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರೂ ಸಂಜೆ ವೇಳೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಚೂರಿ ಇರಿತದ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ಕಾರ್ತಿಕ್ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗಿದ್ದನು. ಆದರೆ ಸಂಜೆ ವೇಳೆಗೆ ಕಾರ್ತಿಕ್‌ನ ಮೃತ ದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಆತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಮದುವೆಗೆ ಒಪ್ಪದ ಕಾರಣಕ್ಕಾಗಿ ಯುವತಿಗೆ ಚೂರಿ ಇರಿದು ಹತ್ಯೆಗೈದ ಯುವಕ ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

About The Author

Leave a Reply

Your email address will not be published. Required fields are marked *

You cannot copy content of this page.