
ಕುಂದಾಪುರ: ಕೋಡಿ ಸೀವಾಕ್ ಸಮೀಪದ ‘ಸೀವಾಕ್ ರೆಸ್ಟೋ ಕೆಫೆ’ ಬಳಿ ಅಸಹಾಯಕರಾಗಿದ್ದ ಮಹಿಳೆ ಮತ್ತು ಆಕೆಯ ಮೂವರು ಚಿಕ್ಕ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.
ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುಕ್ತಾ ಬಾಯಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕೋಡಿ ಬೀಟ್ ಸಿಬ್ಬಂದಿ ಗೋಪಾಲ ಖಾರ್ವಿ ಅವರೊಂದಿಗೆ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಮಹಿಳೆಯನ್ನು ಗಮನಿಸಿ ವಿಚಾರಣೆ ನಡೆಸಿದರು.
ಈಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿಯ ಸ್ಲಂ ನಿವಾಸಿ ಬದ್ರೇಶ್ ಎಂಬವರ ಪತ್ನಿ ಸಂಗೀತಾ (27) ಎಂದು ತಿಳಿದುಬಂದಿದೆ. ಈಕೆ ತನ್ನ ಮಕ್ಕಳಾದ ಅಜಯ್ (9), ಖುಷಿ (8) ಮತ್ತು ರೋಜಾ (5) ಅವರೊಂದಿಗೆ ಯಾವುದೇ ಆಧಾರವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದರು.
ತನ್ನ ಮತ್ತು ಮಕ್ಕಳ ಭವಿಷ್ಯ ಹಾಗೂ ಶಿಕ್ಷಣಕ್ಕಾಗಿ ಮಹಿಳೆ ಸಹಾಯ ಕೋರಿದಾಗ, ಎಸ್ಐ ಮುಕ್ತಾ ಬಾಯಿ ಮತ್ತು ಗೋಪಾಲ ಖಾರ್ವಿ ಅವರು ಸಮಾಲೋಚನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಅವರ ಸಹಕಾರದೊಂದಿಗೆ ಮಕ್ಕಳನ್ನು ಉಡುಪಿಯ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನಕ್ಕೆ ದಾಖಲಿಸಲಾಯಿತು.
ಕೋಡಿ ಸೀವಾಕ್ ರೆಸ್ಟೋ ಕೆಫೆ ನಡೆಸುತ್ತಿರುವ ಜ್ಯೋತಿ ಮತ್ತು ವಿಕಾಸ್ ದಂಪತಿಗಳು ಸ್ವಯಂಪ್ರೇರಿತರಾಗಿ ಸಂಗೀತಾಗೆ ಆಶ್ರಯ ಮತ್ತು ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಸದ್ಯ ಆಕೆಯನ್ನು ಅವರ ಆರೈಕೆಯಲ್ಲಿ ಇರಿಸಲಾಗಿದೆ.
ಪೊಲೀಸರ ಈ ಸಮಯೋಚಿತ ನಿರ್ಧಾರ ಮತ್ತು ಸಾರ್ವಜನಿಕರ ಸಹಕಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
