
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ(20) ಎಂಬವರ ಮನೆಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಕಳವಾಗಿದ್ದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ದೂರುದಾರೆಯ ತಂದೆಗೆ ಆರೋಪಿತೆ ಶೃತಿ @ ವಿಶ್ಮೀತ(37) ಎಂಬಾಕೆಯೊಂದಿಗೆ ಸಂಪರ್ಕವಿದ್ದು, ಆಕೆಗೆ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಆರೋಪಿತೆ ಅದನ್ನು ಮರಳಿಸುವುದಾಗಿ ಹೇಳಿ ಏಪ್ರಿಲ್ 7ರಂದು ಪುಣ್ಯಶ್ರೀಯ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಆ ದಿನ ಪುಣ್ಯಶ್ರೀ ಕೆಲಸಕ್ಕೆ ತೆರಳಿದ್ದು, ಬಳಿಕ ರಾತ್ರಿ ಮನೆಗೆ ವಾಪಾಸಾದಾಗ ಮನೆಯ ಕಪಾಟಿನ ಬೀಗದ ಕೀ ಕೆಳಗೆ ಬಿದ್ದಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ, ಮನೆಯಲ್ಲಿದ್ದ ಸುಮಾರು ರೂ.5 ಲಕ್ಷ ಮೌಲ್ಯದ 62½ ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಪತ್ತೆಯಾಯಿತು..
ಈ ಕುರಿತು ಪುಣ್ಯಶ್ರೀ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 49/2026, ಕಲಂ 331(3), 305 BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿತೆ ಶೃತಿ @ ವಿಶ್ಮೀತ ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಳವಾಗಿದ್ದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
