
13 ವರ್ಷಗಳ ಹಿಂದೆ ಕಾರ್ಕಳದ ಮನೆಯಿಂದ ನಾಪತ್ತೆಯಾಗಿದ್ದ ಯುವಕ ಮರಳಿ ಮನೆ ಸೇರಿದ್ದಾನೆ. ಉಡುಪಿ ಪೊಲೀಸರ ವಿಶೇಷ ತನಿಖಾ ತಂಡ ಯುವಕನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಕರೆ ತಂದಿದ್ದಾರೆ.
ಕಾರ್ಕಳ ಮುಂಡ್ಕೂರು ನಿವಾಸಿ ಪ್ರಭಾಕರ್ ಪ್ರಭು ಅವರ ಪುತ್ರ ಅನಂತಕೃಷ್ಣ ಪ್ರಭು ಮರಳಿ ಮನೆ ಸೇರಿದ ಯುವಕ. ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಈತ 2012ರ ಡಿಸೆಂಬರ್ 6ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದ.
ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆತನ ಸುಳಿವು ಲಭ್ಯವಾಗಿರಲಿಲ್ಲ. ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು, ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ತನಿಖಾ ತಂಡ ಕೈಗೊಂಡ ಕಾರ್ಯಾಚರಣೆಯಲ್ಲಿ ಯುವಕ ಬೆಂಗಳೂರಿನಲ್ಲಿರುವುದು ಪತ್ತೆಯಾಗಿದೆ. ಅದರಂತೆ ಯುವಕ ಅನಂತಕೃಷ್ಣ ಪ್ರಭು ಅವರನ್ನು ಪತ್ತೆ ಹಚ್ಚಿ ಉಡುಪಿಗೆ ಕರೆ ತಂದಿದ್ದಾರೆ. ಯುವಕ ಬೆಂಗಳೂರಿನಲ್ಲಿ ಅರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ. ಉಡುಪಿ ಜಿಲ್ಲಾ ಎಸ್ಪಿ ಕಚೇರಿಗೆ ಕರೆ ತಂದಿದ್ದು, ಹರಿರಾಂ ಶಂಕರ್ ಅವರ ಸಮ್ಮುಖದಲ್ಲಿ ಯುವಕನನ್ನು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ. ಪೊಲೀಸರ ಕಾರ್ಯಕ್ಕೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ ಮಾರ್ಗದರ್ಶನದಲ್ಲಿ ನಗರ ಠಾಣಾ ಎಸ್ಐ ಈರಣ್ಣ ಶಿರಗುಂಪಿ , ಬ್ರಹ್ಮಾವರ ಠಾಣಾ ಎಸ್ಐ ಸುದರ್ಶನ್ ದೊಡ್ಡಮನಿ, ಸಿಬ್ಬಂದಿಗಳಾದ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ, ಮಲ್ಲಯ್ಯ ಹಿರೇಮಠ್ ಭಾಗವಹಿಸಿದ್ದರು.
