
ಕುಂದಾಪುರ: ಪ್ರೀತಿಸಿದ ಯುವಕನೇ ಹಣಕ್ಕಾಗಿ ಪೀಡಿಸಿ, ಸಾಯುವಂತೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಯುವತಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲ್ಲೂರಿನಲ್ಲಿ ನಡೆದಿದೆ.
ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಕಾಲೋನಿ ನಿವಾಸಿ ಶಶಿಕಲಾ (20) ಮೃತಪಟ್ಟ ದುರ್ದೈವಿ. ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಶಶಿಕಲಾ, ಕಳೆದ ಒಂದು ವರ್ಷದಿಂದ ಮಂಜುನಾಥ (19) ಎಂಬಾತನನ್ನು ಪ್ರೀತಿಸುತ್ತಿದ್ದರು. ಏಪ್ರಿಲ್ 3 ರಂದು ಶಶಿಕಲಾ ಕಾಣೆಯಾಗಿದ್ದ ಬಗ್ಗೆ ಮನೆಯವರು ಹುಡುಕಾಟ ನಡೆಸಿದಾಗ, ರಾತ್ರಿ 9:20ರ ಸುಮಾರಿಗೆ ಮನೆಯ ಹತ್ತಿರದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆರೋಪಿ ಮಂಜುನಾಥ ನಿರಂತರವಾಗಿ ಶಶಿಕಲಾ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. “ಹಣ ಹೊಂದಿಸಲು ಆಗದಿದ್ದರೆ ನೀನು ನನಗೆ ಬೇಡ, ಎಲ್ಲಿಯಾದರೂ ಬಿದ್ದು ಸತ್ತು ಹೋಗು” ಎಂದು ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾಗಿ ಮೃತರ ಅಕ್ಕ ರಮ್ಯಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರೇಮಿಯ ಈ ನಿಷ್ಠುರದ ಮಾತು ಹಾಗೂ ಪ್ರಚೋದನೆಯಿಂದಲೇ ಶಶಿಕಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಮಂಜುನಾಥ ವಿರುದ್ಧ ಬಿಎನ್ಎಸ್ ಕಲಂ 108ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
