
ಪಾವಂಜೆ ಬ್ರಿಡ್ಜ್ನಿಂದ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪಿ.ವಿ.ಎಸ್ ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75) ಎಂದು ಗುರುತಿಸಲಾಗಿದೆ.
ಆ.4ರಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬರ್ಕೆ ಪೊಲೀಸ್ ಠಾಣೆ ಸರಹದ್ದಿಗೆ ಒಳಪಟ್ಟು ಪಿ.ವಿ.ಎಸ್ ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75) ಮಣ್ಣಗುಡ್ಡ ರವರು ಬೆಳಿಗ್ಗೆ ಕುದ್ರೋಳಿ ದೇವಸ್ಥಾನಕ್ಕೆಂದು ಹೋದವರು ಮರಳಿ ಮನೆಗೆ ಬಂದಿಲ್ಲವೆಂಬುದಾಗಿ ನಿತಿನ್ ಎಂಬವರು ಬರ್ಕೆ ಪೊಲೀಸ್ ಠಾಣೆಗೆ ತಿಳಿಸಿರುತ್ತಾರೆ. ಆ ಕೂಡಲೇ ಈ ಮಾಹಿತಿಯನ್ನು ಬರ್ಕೆ ಪೊಲೀಸ್ ಠಾಣೆಯ ಎ.ಎಸ್.ಐ ಸುಧಾಕರ್ ರವರು ERSS-112 ಗೆ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.
ಈ ಸಮಯದಲ್ಲಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ERSS-112 ಕರ್ತವ್ಯದಲ್ಲಿದ್ದ ಪೊಲೀಸರಾದ ಹೆಡ್ ಕಾನ್ಸ್ಟೇಬಲ್ಗಳಾದ ಯೊಗೀಶ್, ಕಿಶೋರ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮಧುಕರ್ ರವರು ಮಾಹಿತಿಯನ್ನು ಸ್ವೀಕರಿಸಿ ಶೀಘ್ರ ಕಾರ್ಯಚಕಿತರಾಗಿ ಮಾಹಿತಿಯ ಮೇರೆಗೆ ಪಾವಂಜೆ ಬ್ರಿಡ್ಜ್ ಬಳಿ ತೆರಳಿದಾಗ ಪಾವಂಜೆ ಬ್ರಿಡ್ಜ್ನ ದಂಡೆಯ ಮೇಲಿನಿಂದ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ವಿಶ್ವನಾಥ ಶೆಟ್ಟಿರವರನ್ನು ಸಾರ್ವಜನಿಕರ ಸಹಾಯದೊಂದಿಗೆ ಸಕಲಾದಲ್ಲಿ ತಡೆದು ಅವರ ಜೀವರಕ್ಷಣೆಯನ್ನು ಮಾಡಿರುತ್ತಾರೆ.
ಈ ಸಮಯದಲ್ಲಿ ವಿಶ್ವನಾಥ ಶೆಟ್ಟಿಯವರು ಚರ್ಮದ ಖಾಯಿಲೆಯಿಂದ ಬಳಲುತ್ತಿರುವ ವಿಚಾರದಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿರುವ ವಿಷಯ ಬೆಳಕಿಗೆ ಬಂದಿರುತ್ತದೆ. ಬಳಿಕ ವಿಶ್ವನಾಥ ಶೆಟ್ಟಿಯವರನ್ನು ಸಹೋದರಿ ವಾಣಿ ಶೆಟ್ಟಿ ಹಾಗೂ ಮಾಜಿ ಕಾರ್ಪೊರೇಟರ್ ಪ್ರಕಾಶ್ ರವರ ಜೊತೆಗೆ ಕಳುಹಿಸಿಕೊಡಲಾಗಿರುತ್ತದೆ.
