![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಾಲ್ವರು ಕುಖ್ಯಾತ ದುಷ್ಕರ್ಮಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕುಂಜತ್ತಬೈಲ್ ದೇವಿನಗರ ನಿವಾಸಿ ರಾಜಾ ಅಲಿಯಾಸ್ ಜಪಾನ್ ಮಂಗ, ಬೆಂಗ್ರೆ ನಿವಾಸಿ ಕಬೀರ್, ಸುರತ್ಕಲ್ ಕೃಷ್ಣಾಪುರ ಚೊಕ್ಕಬೆಟ್ಟು 8ನೇ ನಿವಾಸಿ ನಿಸಾರ್ ಹುಸೇನ್, ಕಣ್ಣೂರು ಪಡೀಲ್ ನಿವಾಸಿ ಪ್ರಕಾಶ್ ಶೆಟ್ಟಿ ಬಂಧಿತರು.
ರಾಜಾ ಅಲಿಯಾಸ್ ಜಪಾನ್ ಮಂಗ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ, ಹತ್ಯೆ ಯತ್ನ, ಹಲ್ಲೆ ಹಾಗು ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆೇ ಪೊಲೀಸರ ಕೈಗೂ ಸಿಗದೇ 2017ರಿಂದ ತಲೆಮರೆಸಿಕೊಂಡಿದ್ದನು. ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕಬೀರ್ ವಿರುದ್ಧ ದಾಖಲಾಗಿರುವ 8 ಪ್ರಕರಣಗಳಲ್ಲಿ ಜಾಮೀನುರಹಿತ ವಾರಂಟ್ ಇತ್ತು. ಇದೀಗ ಆತ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಿಸಾರ್ ಹುಸೇನ್ ವಿರುದ್ಧ ದ.ಕ.ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಈತನ ವಿರುದ್ಧವೂ ಜಾಮೀನುರಹಿತ ವಾರಂಟ್ ಇತ್ತು. ಪ್ರಕಾಶ್ ಶೆಟ್ಟಿ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.