
ಕಾಪು : ಕೌಟುಂಬಿಕ ಕಲಹ ಹಾಗೂ ಪತ್ನಿ ಮನೆಗೆ ಮರಳದಿದ್ದಕ್ಕೆ ಮನನೊಂದ ಗೋವಾ ಮೂಲದ ಜಹಿರ್ ಅಬ್ದುಲ್ ಮಾಂಗಾವಕರ್ (42) ಎಂಬುವವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನಲ್ಲಿ ಹೆಂಡತಿಯ ಮನೆಯ ಎದುರಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಕ್ಷಿಣ ಗೋವಾದ ಕಿರ್ಲೆಪಾಲ್ ನಿವಾಸಿಯಾದ ಜಹಿರ್ ಅಬ್ದುಲ್ ಅವರು, ಬೆಳಪುವಿನ ಜವನರಕಟ್ಟೆಯ ಮುಸ್ತಪಾ ಎಂಬುವವರ ಮಗಳು ಸಮೀನಾ ಅವರನ್ನು 2012ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಸಂಸಾರದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿದ್ದು, ಈ ಹಿಂದೆ ಜಹಿರ್ ಒಮ್ಮೆ ಬೆಳಪುವಿನಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದರು ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ತಂದೆಯ ಅನಾರೋಗ್ಯದ ಕಾರಣ ತವರಿಗೆ ಬಂದಿದ್ದ ಸಮೀನಾ, ಆ ಬಳಿಕ ಪತಿ ಕರೆದರೂ ಗೋವಾಕ್ಕೆ ಮರಳಲು ನಿರಾಕರಿಸಿದ್ದಳು. ಅಷ್ಟೇ ಅಲ್ಲದೆ, ಗೋವಾದಲ್ಲಿ ಓದುತ್ತಿದ್ದ ಮಗನ ಶಾಲಾ ಪ್ರಮಾಣಪತ್ರವನ್ನು (ಟಿಸಿ) ತವರೂರಿಗೆ ತರಿಸಿಕೊಂಡಿದ್ದಳು. ಇದರಿಂದ ತೀವ್ರ ಮಾನಸಿಕ ನೊಂದ ಜಹಿರ್ ಅವರು ಮೇ 15ರಂದು ಗೋವಾದಿಂದ ಬೆಳಪುವಿಗೆ ಬಂದಿದ್ದರು. ಮೇ 16ರಂದು ಮುಂಜಾನೆ 6:15ರ ಸುಮಾರಿಗೆ ಪತ್ನಿಯ ಮನೆಯ ಎದುರೇ ಇದ್ದ ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಮ್ಮ ಶಾಹಿರ್ ಅಬ್ದುಲ್ ಮಾಂಗಾವಕರ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 12/2026, ಕಲಂ 194 ಬಿ.ಎನ್.ಎಸ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
