
ಮಂಗಳೂರು: ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಇಂಟರ್ಪೋಲ್ ಮೂಲಕ ಪೊಲೀಸ್ ಇಲಾಖೆ ರೆಡ್ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ (38) ಮತ್ತು ಶಂಶುದ್ದೀನ್ (36) ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ ನಗರದ ಲೇಡಿಹಿಲ್ ಬಳಿ ಉರ್ವ ಠಾಣೆಯಲ್ಲಿ ಆಗ ಎಎಸ್ಸೈ ಆಗಿದ್ದ ಐತಪ್ಪ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. 2013ರಲ್ಲಿ ದೇರಳಕಟ್ಟೆಯಲ್ಲಿ ಗ್ಯಾಂಗ್ರೇಪ್ ಪ್ರಕರಣದಲ್ಲಿ ಕೂಡ ಈತ ಆರೋಪಿಯಾಗಿದ್ದ. ಈತನ ವಿರುದ್ಧ 14 ಪ್ರಕರಣಗಳು ದಾಖಲಾಗಿವೆ. ಈತ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಶುದ್ದೀನ್ ಯಾನೆ ಅಲ್ತಾಫ್ ಯಾನೆ ಅಲ್ತಾಫ್ ಇಮ್ರಾನ್ ಯಾನೆ ಇಮ್ರಾನ್ 2008ರಲ್ಲಿ ಮೂಲ್ಕಿಯ ಪಾವಂಜೆ ಬಳಿ ಪ್ರವೀಣ್ ಎಂಬವರನ್ನು ಅಪಹರಿಸಿ ಕಾರು ಮತ್ತು ಬೆಲೆ ಬಾಳುವ ಸೊತ್ತುಗಳನ್ನು ದೋಚಿ, ಕಳವಾರು ಬಳಿಯ ಕೋರೆಯೊಂದಕ್ಕೆ ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬನಾಗಿದ್ದ. ಈ ಪ್ರಕರಣದಲ್ಲಿ ಎಲ್ಲರೂ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಸಂಶುದ್ದೀನ್ ನಕಲಿ ದಾಖಲೆಗಳ ಮೂಲಕ ಶೇಕ್ ಮುಹಮ್ಮದ್ ಸಿದ್ದೀಕ್ ಎಂದು ಹೆಸರು ಬದಲಿಸಿ ವಿದೇಶಕ್ಕೆ ಪರಾರಿಯಾಗಿದ್ದ.
