ನವದೆಹಲಿ: ಈ ಹಿಂದೆ ಜಾರಿಯಲ್ಲಿದ್ದ 4 ಜಿಎಸ್ಟಿ ಸ್ಲ್ಯಾಬ್ಗಳನ್ನು ಕೇಂದ್ರ ಸರ್ಕಾರ 2 ಸ್ಲ್ಯಾಬ್ಗಳಿಗೆ ಇಳಿಸಿದೆ. ಈ ಜಿಎಸ್ಟಿ (GST) ದರಗಳಿಗೆ ಇಂದು ನಡೆದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ನಡೆದ GST ಮಂಡಳಿಯ 56ನೇ ಸಭೆಯು ಈ ನಿರ್ಧಾರ ತೆಗೆದುಕೊಂಡಿದೆ. ಅಸ್ತಿತ್ವದಲ್ಲಿರುವ ಶೇ. 12 ಮತ್ತು ಶೇ. 28ರ ಸ್ಲ್ಯಾಬ್ಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಇನ್ಮುಂದೆ ಶೇ. 5 ಮತ್ತು ಶೇ. 18ರ ಸ್ಲ್ಯಾಬ್ ದರಗಳು ಮಾತ್ರ ಜಾರಿಯಲ್ಲಿರಲಿವೆ.
ಸೆಪ್ಟೆಂಬರ್ 22ರಿಂದ GST ಮಂಡಳಿಯ ನಿರ್ಧಾರಗಳು ಜಾರಿಗೆ ಬರಲಿದೆ. ಆರೋಗ್ಯ, ಜೀವವಿಮೆ ಮೇಲಿನ ಜಿಎಸ್ಟಿಯನ್ನು ಸಹ ರದ್ದುಪಡಿಸಲಾಗಿದೆ. ಜಿಒಎಂನ ಎಲ್ಲಾ ಶಿಫಾರಸುಗಳನ್ನು ಜಿಎಸ್ಟಿ ಮಂಡಳಿಯು ಅನುಮೋದಿಸಿದೆ. ಎಲ್ಲಾ ರಾಜ್ಯಗಳು ಈ ಪ್ರಸ್ತಾವನೆಗಳಿಗೆ ಸರ್ವಾನುಮತದಿಂದ ಒಪ್ಪಿಕೊಂಡಿವೆ. ಈ ಮೂಲಕ ದೇಶದ ಜನರಿಗೆ ಬಂಪರ್ ಕೊಡುಗೆ ನೀಡಲಾಗಿದೆ.
ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಬಯಕೆಯ ಬಗ್ಗೆ ನಾನು ಮಾತನಾಡಿದ್ದೆ. ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಿಎಸ್ಟಿ ದರಗಳ ಸಮಗ್ರ ಮತ್ತು ತರ್ಕಬದ್ಧ ಸುಧಾರಣೆಗೆ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿ, ಕೇಂದ್ರ ಸರ್ಕಾರವು ಸಲ್ಲಿಸಿದ ಜಿಎಸ್ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ಸಾಮಾನ್ಯ ಜನರು, ರೈತರು, ಎಂಎಸ್ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಮಗ್ರ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 93,000 ಕೋಟಿ ರೂ. ಆದಾಯ ಕಡಿಮೆಯಾಗಲಿದೆ. ದಸರಾ ಹಬ್ಬಕ್ಕೂ ಸ್ವಲ್ಪ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ರಾಜ್ಯ ಹಣಕಾಸು ಸಚಿವರು ತಿಳಿಸಿದ್ದಾರೆ. ಮುಖ್ಯವಾಗಿ, ಯಾವುದೇ ಹೊಸ ಲೆವಿಗಳು ಅಥವಾ ಹೆಚ್ಚುವರಿ ಸೆಸ್ಗಳು ಇರುವುದಿಲ್ಲ ಎಂದು ಕೌನ್ಸಿಲ್ ಒಪ್ಪಿಕೊಂಡಿದೆ. ಇದು 2017ರಲ್ಲಿ GST ಜಾರಿಗೆ ಬಂದ ನಂತರದ ಅತ್ಯಂತ ಮಹತ್ವದ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ.