ವೇಣೂರು: ಬೆಂಗಳೂರು ಸೇರಿದಂತೆ ರಾಜ್ಯದ ಅಲ್ಲಲ್ಲಿ ಭಾರೀ ಮಳೆಯಾಗುತ್ತಿರುವ ಹಲವು ದಿನಗಳಿಂದ ಕೇಳುತ್ತಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗಿದೆ. ವಿಪರ್ಯಾಸವೆಂದರೆ ತಾಲೂಕಿನ ಕೆಲವು ಭಾಗದಲ್ಲಿ ಇನ್ನೂ ಹೇಳಿಕೊಳ್ಳುವಂತಹ ಮಳೆ ಸುರಿದೇ ಇಲ್ಲ. ಕುಡಿಯುವ ನೀರಿಗಾಗಿ ಹಾಹಾಕಾರ ಅಷ್ಟಿಷ್ಟಲ್ಲ. ತಾಲೂಕಿನ ಶಿರ್ಲಾಲುವಿನಲ್ಲಿ ನಿನ್ನೆ ಭಾರೀ ಮಳೆ ಸುರಿದು ನದಿಗಳಲ್ಲಿ ಈಗಲೂ ನೀರು ಹರಿಯುತ್ತಿದೆ. ಆದರೆ ವೇಣೂರಿಗೆ ಒಂದೆರಡು ಸಣ್ಣ ಮಳೆ ಬಿಟ್ಟರೆ ಈ ಬಾರಿ ಮಳೆಯೇ ಬಿದ್ದಿಲ್ಲ. ಇಲ್ಲಿಯ ಫಲ್ಗುಣಿ ನದಿಯಲ್ಲಿ ಒಂದು ಹನಿಯೂ ನೀರಿಲ್ಲ. ಬೊಗ್ಗುರಕುಂಡಿ ಎಂದು ಹೇಳಿಕೊಳ್ಳುವ ವೇಣೂರು ಮುಖ್ಯಪೇಟೆಯ ನದಿಯಲ್ಲೇ ಕಾಣಸಿಗುವ ಗುಂಡಿಯಲ್ಲಿ ಇಂದೆಂದೂ ಬತ್ತದ ರೀತಿಯಲ್ಲಿ ನೀರು ಬತ್ತಿದೆ. ಶೇ. 75ರಷ್ಟು ಬಾವಿಗಳು ಬತ್ತಿ ಹೋಗಿವೆ. ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿಕರು ಕಂಗಲಾಗಿದ್ದಾರೆ. ಕಳೆದ ಕೆಲ ದಿನಗಳಲ್ಲಿ ನಾರಾವಿ, ಅಳದಂಗಡಿ ಹಾಗೂ ಸುತ್ತಮುತ್ತಲ ಪರಿಸರಲ್ಲಿ ಮಳೆಯಾಗಿದ್ದರೂ ವೇಣೂರು ಪರಿಸರದಲ್ಲಿ ಮಾತ್ರ ಮೋಡಕವಿದ ವಾತಾವರಣ ಬಿಟ್ಟರೆ ಮಳೆಯೇ ಆಗಿಲ್ಲ.
ಕೊನೆಗೂ ಇಂದು ಮಾನ್ಸೂನ್ ಕೇರಳ ಪ್ರವೇಶಿಸಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಇಂದಿನಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು, ಜೂನ್ 08: ಗುರುವಾರ ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಕೇರಳದಲ್ಲಿ ಈಗಾಗಲೇ ಮಾನ್ಸೂನ್ ಪ್ರಾರಂಭವಾಗಿದ್ದು, ಸಾಮಾನ್ಯಕ್ಕಿಂತ ಒಂದು ವಾರ ತಡವಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.
‘ನೈಋತ್ಯ ಮಾನ್ಸೂನ್ ಇಂದು ಅಂದರೆ ಜೂನ್ 08, 2023 ರಂದು ಬಂದಿದೆ. ಇದು ಸಾಮಾನ್ಯವಾಗಿ ಜೂನ್ 01 ಕ್ಕೆ ಬರಬೇಕು. ಆದ್ದರಿಂದ, ಈ ಬಾರಿಯ ಮಾನ್ಸೂನ್ ಒಂದು ವಾರ ತಡವಾಗಿದೆ’ ಎಂದು ಐಎಂಡಿ ಟ್ವೀಟ್ ಮಾಡಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಸುಮಾರು ಏಳು ದಿನಗಳ ಪ್ರಮಾಣಿತ ವಿಚಲನದೊಂದಿಗೆ ಕೇರಳದ ಮೇಲೆ ಪ್ರಾರಂಭವಾಗುತ್ತದೆ. ಜೂನ್ 4 ರ ವೇಳೆಗೆ ಕೇರಳಕ್ಕೆ ಮಾನ್ಸೂನ್ ಆಗಮಿಸಬಹುದು ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಜೂನ್ 7 ರಂದು ಕೇರಳದ ಮೇಲೆ ಮಾನ್ಸೂನ್ ಆರಂಭವಾಗಿದೆ.