ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದರಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸ್ಮಶಾನಕ್ಕಾಗಿ ಸ್ಥಳ ಮಂಜೂರುಗೊಳಿಸುವಂತೆ ಹಲವಾರು ಗ್ರಾಮ ಸಭೆಗಳಲ್ಲಿ ಬೇಡಿಕೆ ಇಟ್ಟರೂ ಯಾರು ಕೂಡ ಗ್ರಾಮಸ್ಥರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ನೆರಿಯದಲ್ಲಿ ಪ್ರತಿಭಟನೆ ನಡೆಸಿದರು.
ಜು.14 ರಂದು ಜನತಾ ಕಾಲನಿ ನಿವಾಸಿಯೊಬ್ಬರು ಮೃತಪಟ್ಟಿದ್ದು ಅವರ ಮೃತದೇಹವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ನೆರಿಯ ಗ್ರಾಮ ಪಂಚಾಯತ್ ಎದುರೇ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಮೃತರ ಮನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಸಿದ್ದಾರೆ.
ಇಷ್ಟು ವರ್ಷ ಬೇಡಿಕೆ ಈಡೇರಿಲ್ಲ, ಸ್ಮಶಾನ ಆಗುವ ತನಕ ಪಂಚಾಯತ್ ಗೆ ಬೀಗ ಹಾಕಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದಾರೆ.
ನಮಗೆ ಜಾಗ ಇವತ್ತೇ ನಿಗದಿ ಪಡಿಸಬೇಕು ಒಂದು ವೇಳೆ ಇವತ್ತೂ ಕೂಡ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಪಂಚಾಯತ್ ಎದುರು ಅಂತ್ಯ ಸಂಸ್ಕಾರವನ್ನು ನೆರವೇರಿಸುತ್ತೇವೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಳಿಕ ತಹಶೀಲ್ದಾರ್ ಅವರು ಸ್ಮಶಾನಕ್ಕೆ ಸ್ಥಳ ನಿಗದಿ ಪಡಿಸಿದ ಜಾಗವನ್ನು ಪರಿಶೀಲನೆ ನಡೆಸಿದರು.