![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಉಡುಪಿ : ನಿನ್ನೆಗೆ 50ದಿನಗಳನ್ನು ‘ಕಾಂತಾರ ಸಿನಿಮಾ ‘ ಪೂರೈಸಿದ್ದು, ಈ ನಿಟ್ಟಿನಲ್ಲಿ ಉಡುಪಿಯ ಕಾಪು ಬೀಚ್ ನಲ್ಲಿ ಸ್ಯಾಂಡ್ ಆರ್ಟ್ ಕಲಾವಿದರಿಂದ ಕಾಂತಾರ 50ರ (Fifty Days) ಸಂಭ್ರಮದ ಸುಸಂದರ್ಭದಲ್ಲಿ ಪಂಜುರ್ಲಿ ಕಲಾಕೃತಿಯನ್ನು ಸ್ಯಾಂಡ್ ಆರ್ಟ್ ಮೂಲಕ ಅರಳಿಸಿದ್ದಾರೆ
ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಐವತ್ತು ದಿನಗಳ ಪ್ರದರ್ಶನ ಕಂಡಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನಕ್ಕೆ ಇನ್ನೂ ಸಾಕ್ಷಿ ಆಗುತ್ತಿವೆ. ದೇಶ ವಿದೇಶದಲ್ಲೂ 50ನೇ ದಿನದ ಸಂಭ್ರಮವನ್ನು ಅನೇಕ ಚಿತ್ರಮಂದಿರಗಳು ಆಚರಿಸಿವೆ. ಇದೇ ಹೊತ್ತಿನಲ್ಲೇ ಮಣಿಪಾಲದ ಸ್ಯಾಂಡ್ ಆರ್ಟ್ ಕಲಾವಿದರು ಕಾಪು ಬೀಚ್ ನಲ್ಲಿ ಇಂಥದ್ದೊಂದು ಕಲಾಕೃತಿಯನ್ನು ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
![](https://thrishulnews.com/wp-content/uploads/2022/11/WhatsApp-Image-2022-11-12-at-9.20.22-PM-1-1024x557.jpeg)
ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಕಲಾಕೃತಿಯನ್ನು ಸ್ಯಾಂಡ್ ಆರ್ಟ್ ಹೆಸರಿನಲ್ಲಿ ತಂಡ ಕಟ್ಟಿರುವ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು ಮತ್ತು ವೆಂಕಿ ಪಲಿಮಾರು ಮೂವರು ಒಂದು ದಿನ ಟೈಮ್ ತಗೆದುಕೊಂಡು ರಚಿಸಿದ್ದು, ಇದೀಗ ಕಾಪು ಬೀಚ್ ಗೆ ಸಾವಿರಾರು ಜನರು ಈ ಕಲಾಕೃತಿಯನ್ನು ನೋಡುವುದಕ್ಕೆ ಬರುತ್ತಿದ್ದಾರಂತೆ. ಕಾಂತರ ಸಿನಿಮಾದ ಬಗ್ಗೆ ಅನೇಕರು ಗುಣಗಾನ ಕೂಡ ಮಾಡುತ್ತಿದ್ದಾರೆ
ಒಂದು ಕಡೆ ಮರುಳುಶಿಲ್ಪದ ಸಂಭ್ರಮವಾದರೆ, ಮತ್ತೊಂದು ಕಡೆ ಸೂಪರ್ ಸ್ಟಾರ್ ರಜನಿಕಾಂತ್ ಎರಡು ಮೂರು ವಾರಗಳ ಹಿಂದೆಯಷ್ಟೇ ಕಾಂತಾರ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ತಮ್ಮ ಮನೆಯ ಗೇಟ್ ವರೆಗೂ ಬಂದು, ರಿಷಬ್ (Rishabh Shetty) ಅವರನ್ನು ಬರಮಾಡಿಕೊಂಡಿದ್ದರು. ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ರಿಷಬ್ ಜೊತೆ ಮಾತನಾಡಿ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ನಡುವೆ ರಿಷಬ್ ಅವರನ್ನು ಬೀಳ್ಕೊಡುವಾಗ ಚಿನ್ನದ ಸರ ಮತ್ತು ಬಾಬಾ ಇರುವಂತಹ ಲಾಕೆಟ್ ಕೊಟ್ಟಿದ್ದಾರೆ.
ರಜನಿ ತಮ್ಮ ಗುರುಗಳಾದ ಬಾಬಾ ಅವರನ್ನು ಅತೀ ಹೆಚ್ಚು ಪೂಜಿಸುತ್ತಾರೆ. ಬಾಬಾ ಅವರ ಕೈ ಬೆರಳಿನ ಸಿಂಬಲ್ ಇರುವಂತಹ ಲಾಕೆಟ್ ಗಳನ್ನು ರೆಡಿ ಮಾಡಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾರಾದರೂ ಮೆಚ್ಚುವಂತಹ ಕೆಲಸ ಮಾಡಿದಾಗ, ಅವರನ್ನು ಕರೆದು ಲಾಕೆಟ್ ನೀಡುತ್ತಾರೆ. ಈಗ ಲಾಕೆಟ್ ಪಡೆಯುವಂತಹ ಅದೃಷ್ಟ ರಿಷಬ್ ಪಾಲಾಗಿದೆ. ಬಾಬಾ ಇರುವಂತಹ ಚಿನ್ನದ ಲಾಕೆಟ್ ರಿಷಬ್ ಕೊರಳನ್ನು ಅಲಂಕರಿಸಿದೆ.