ಸುಳ್ಯ : ತಂಡವೊಂದು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಖಾದ್ಯ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬೇಯಿಸಿದ ಮಾಂಸ ವಶಕ್ಕೆ ಪಡೆದ ಘಟನೆ ಸುಳ್ಯ ಗಡಿ ಭಾಗದಲ್ಲಿ ನಡೆದಿದೆ.
ಕೊಡಗು ಸಂಪಾಜೆ ವಲಯದ ದಬ್ಬಡ್ಕದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಮೂವರು ಆರೋಪಿಗಳ ಮನೆಗಳಿಗೆ ದಾಳಿ ಮಾಡಿ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಂಡಿದ್ದಾರೆ.
ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ತಲೆಮರೆಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಧು ಸೂದನ್ ನೇತೃತ್ವದಲ್ಲಿ, ಸಿಬ್ಬಂದಿ ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮಹಮ್ಮದ್, ಗಸ್ತು ಅರಣ್ಯ ಪಾಲಕ ಚಂದ್ರಪ್ಪ ಬಣಕಾರ್, ಕಾರ್ತಿಕ್ ಡಿ. ಹಾಗೂ ಸಿಬ್ಬಂದಿ ಮನೋಜ್, ದುರ್ಗಾ ಪ್ರಸಾದ್, ಗಗನ್, ಶರತ್, ಶಂಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.