ಮದ್ವೆಯಾಗಿ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ!

ವಿಜಯವಾಡ: ಕಳೆದ ಸಂಕ್ರಾಂತಿಯಂದು ಆಂಧ್ರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಅಳಿಯನಿಗೆ 300 ಬಗೆಯ ಖಾದ್ಯಗಳನ್ನು ಮಾಡಿ ಉಣಬಡಿಸಿದ ಸಂಗತಿ ಭಾರೀ ಸುದ್ದಿಯಾಗಿತ್ತು. ಇದೀಗ ಅದೇ ರೀತಿ ಮತ್ತೊಬ್ಬ ಮಹಿಳೆ ತಮ್ಮ ಅಳಿಯನಿಗೆ 108 ಬಗೆಯ ತಿನಿಸುಗಳನ್ನು ತಯಾರಿ ಮಾಡಿ ಭರ್ಜರಿ ಭೋಜನ ನೀಡಿದ್ದಾರೆ.

ನೆಲ್ಲೂರು ಜಿಲ್ಲೆಯ ಪೊದಲಕೂರು ಮಂಡಲದ ಉಚಪಲ್ಲಿ ಗ್ರಾಮವು ಈ ವಿಶೇಷತೆಗೆ ಸಾಕ್ಷಿಯಾಗಿದೆ. 108 ಬಗೆಯ ಖಾದ್ಯಗಳಲ್ಲಿ ವೆಜ್​ ಮತ್ತು ನಾನ್​ವೆಜ್​ ಎರಡೂ ಇದ್ದವು. ಶಿವಕುಮಾರ್​ ಮತ್ತು ಶ್ರೀದೇವಮ್ಮ ಎಂಬುವರು ಉಚಪಲ್ಲಿಯಲ್ಲಿ ವಾಸವಿದ್ದಾರೆ. ಶಿವಕುಮಾರ್​ ಅವರು ಕಂದಲೇರು ಪೊಲೀಸ್ ಠಾಣೆಯಲ್ಲಿ ಹೋಮ್​ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಮಗಳು ಶ್ರೀವಾಣಿಯನ್ನು ನೆಲ್ಲೂರಿನ ಬಿವಾನಗರದ ಶಿವಕುಮಾರ್​ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅಳಿಯ ಮತ್ತು ಮಾವ ಇಬ್ಬರದೂ ಒಂದೇ ಹೆಸರು.

ಮಗಳನ್ನು ಇತ್ತೀಚೆಗಷ್ಟೇ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ 108 ಬಗೆಯ ಭಕ್ಷ್ಯ ಭೋಜನಗಳನ್ನು ತಯಾರಿಸಿ ಉಣಬಡಿಸಿದ್ದಾರೆ.

ಊಟದ ಮೆನುವಲ್ಲಿ ಏನೇನಿತ್ತು ಎಂದು ನೋಡುವುದಾದರೆ, ಮಟನ್​, ಚಿಕನ್​, ಮೀನು, ಸಿಗಡಿ, ರಸಂ, ಸಾಂಬಾರ್​ ಹಾಗೂ ಮೊಸರು ಜೊತೆಗೆ ವಿವಿಧ ಪೇಸ್ತ್ರಿ ಮತ್ತು ಸಿಹಿತಿಂಡಿಗಳು ಇದ್ದವು. ಎಲ್ಲ ರೀತಿಯ ಭಕ್ಷ್ಯವನ್ನು ಒಂದೇ ಟೇಬಲ್​ನಲ್ಲಿ ಇಟ್ಟು ಅಳಿಯನಿಗೆ ಬಡಿಸಲಾಯಿತು. ಊಟದ ವೇಳೆ ಮೊಬೈಲ್​ನಲ್ಲಿ ಸೆರೆಹಿಡಿಯಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ. ಇಂಥಾ ಅತ್ತೆ-ಮಾವನನ್ನು ಪಡೆದ ನೀನೇ ಪುಣ್ಯವಂತ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಸಂಕ್ರಾಂತಿ ಸಂದರ್ಭದಲ್ಲಿ ಆಂಧ್ರದಲ್ಲಿ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಸಂಪ್ರದಾಯವಂತೆ. ಅದೇ ರೀತಿ ಕಳೆದ ಸಂಕ್ರಾಂತಿಯಂದು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಮಹಿಳೆಯೊಬ್ಬರು ತಮ್ಮ ಅಳಿಯನಿಗೆ 300 ಬಗೆಯ ಖಾದ್ಯಗಳನ್ನು ತಯಾರಿಸಿ ಸುದ್ದಿಯಾಗಿದ್ದರು. ಭೀಮಾವರಂನ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ದಂಪತಿಯ ಪುತ್ರಿ ಹರಿಕಾ ಅವರು ಪೃಥ್ವಿ ಗುಪ್ತಾ ಅವರನ್ನು ವಿವಾಹವಾಗಿದ್ದಾರೆ. ಸಂಕ್ರಾಂತಿಯಂದು ಹೊಸ ಅಳಿಯ ಆಗಮಿಸುತ್ತಿದ್ದಂತೆ 300 ಬಗೆಯ ವಿಧದ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು.

Check Also

ಉಡುಪಿ: ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಉಡುಪಿ: ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ. ಸ್ವಿಫ್ಟ್ …

Leave a Reply

Your email address will not be published. Required fields are marked *

You cannot copy content of this page.