ಲಿಂಗ ಬದಲಾವಣೆ ಮಾಡಿಸಿಕೊಳ್ಳುವು ತುಂಬಾ ಅಂದರೆ ತೀರಾ ವೈಯಕ್ತಿಕ ವಿಷಯ. ಹೆಣ್ಣಾಗಿ ಅಥವಾ ಗಂಡಾಗಿ ಹುಟ್ಟಿ ಮತ್ತೆ ತಮ್ಮ ಮನಸ್ಸು ಒಪ್ಪದೆ ತಮ್ಮ ಒಪ್ಪಿಗೆಯಿಂದ ಮಾಡಿಕೊಳ್ಳುವ ಬದಲಾವಣೆ ಅದು. ಆದರೆ, ಬಲವಂತಾವಾಗಿ ಒಬ್ಬ ವ್ಯಕ್ತಿಯ ಲಿಂಗ ಬದಲಾವಣೆ ಮಾಡುವುದು ನಿಜಕ್ಕೂ ಅಪರಾಧ.
ಇಂತಹ ಒಂದು ಕೃತ್ಯ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಮುಜಾಫರ್ನಗರದ ವ್ಯಕ್ತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ತನಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುಜಾಫರ್ನಗರದ 20 ವರ್ಷದ ಮುಜಾಹಿದ್ ಇಂತಹ ಕೃತ್ಯಕ್ಕೆ ಬಲಿಯಾಗಿರುವ ಯುವಕ.
ಓಂಪ್ರಕಾಶ್ ಎಂಬಾತ ತನಗೆ ನಿದ್ರಾಜನಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿ ಪ್ರಜ್ಞೆ ತಪ್ಪಿಸಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಎನ್ಡಿಟಿವಿ ವರದಿಯ ಪ್ರಕಾರ, ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಶಾಮೀಲಾಗಿ ಆರೋಪಿ ಓಂಪ್ರಕಾಶ್ ಇಂತಹ ಕೆಲಸ ಮಾಡಿಸಿದ್ದಾರೆ ಎಂದು ಮುಜಾಹಿದ್ ಆರೋಪಿಸಿದ್ದಾರೆ.
ಓಂಪ್ರಕಾಶ್ ಕಳೆದ ಎರಡು ವರ್ಷಗಳಿಂದ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು 20 ವರ್ಷದ ಯುವಕ ಮುಜಾಹಿದ್ ಹೇಳಿಕೊಂಡಿದ್ದಾನೆ. ಜೂನ್ 3 ರಂದು ಓಂಪ್ರಕಾಶ್ ಅವರು ಮುಜಾಹಿದ್ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಮನ್ಸೂರ್ಪುರದ ಬೆಗ್ರಾಜ್ಪುರ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಆಮಿಷ ಒಡ್ಡಿದ್ದರು.
“ಓಂಪ್ರಕಾಶ್ ನನ್ನನ್ನು ಇಲ್ಲಿಗೆ ಕರೆತಂದರು, ಮರುದಿನ ಬೆಳಗ್ಗೆ ನನಗೆ ಆಪರೇಷನ್ ಮಾಡಲಾಗಿದೆ. ನನಗೆ ಪ್ರಜ್ಞೆ ಬಂದಾಗ, ನಾನು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದೇನೆ ಎಂದು ವೈದ್ಯರು ಹೇಳಿದ್ದಾರೆ” ಎಂದು ಮುಜಾಹಿದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ನನಗೆ ಎಚ್ಚರವಾದಾಗ, ಓಂಪ್ರಕಾಶ್ ನಾನು ಈಗ ಮಹಿಳೆಯಾಗಿದ್ದೇನೆ. ನನ್ನನ್ನು ಮದುವೆಯಾಗಲು ಲಕ್ನೋಗೆ ಕರೆದುಕೊಂಡು ಹೋಗುವುದಾಗಿ ಹೇಳಿದನು. ನಾನು ವಿರೋಧಿಸಿದರೆ ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ತನ್ನ ಒಪ್ಪಿಗೆಯಿಲ್ಲದೆ ವೈದ್ಯರು ಓಂಪ್ರಕಾಶ್ ಅವರೊಂದಿಗೆ ಶಾಮೀಲಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ” ಎಂದು ಮುಜಾಹಿದ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಆದರೆ, ಬೇಗ್ರಾಜ್ಪುರ ವೈದ್ಯಕೀಯ ಕಾಲೇಜಿನ ವೈದ್ಯರು ಮುಜಾಹಿದ್ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮುಜಾಹಿದ್ ತನ್ನ ಸ್ವಂತ ಇಚ್ಛೆಯಿಂದ ತನ್ನ ಲಿಂಗ ಬದಲಾವಣೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಆದರೆ, ಪ್ರಕರಣ ಸಂಬಂಧ ದೂರ ದಾಖಲಾಗಿ, ಓಂಪ್ರಕಾಶ್ನನ್ನು ಬಂಧಿಸಲಾಗಿದೆ.
ಮುಜಾಹಿದ್ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೂನ್ 16 ರಂದು ಓಂಪ್ರಕಾಶ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವೈದ್ಯಕೀಯ ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದೆ. ಆಸ್ಪತ್ರೆಯು ಅಕ್ರಮ ಅಂಗಾಂಗ ವ್ಯಾಪಾರ ಮತ್ತು ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಬಿಕೆಯು ಮುಖಂಡರು ಹೇಳುತ್ತಾರೆ.
“ದೇಹದ ಪ್ರಮುಖ ಅಂಗಗಳನ್ನು ತೆಗೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದೊಡ್ಡ ದಂಧೆ ಇಲ್ಲಿ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿದೆ” ಎಂದು ಕೃಷಿ ಮುಖಂಡ ಶ್ಯಾಮ್ ಪಾಲ್ ಹೇಳುತ್ತಾರೆ. ಸಂತ್ರಸ್ತ ಮುಜಾಹಿದ್ಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಶ್ಯಾಮ್ ಪಾಲ್ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.