ಕೋಟ: ಕುಡಿದು ಬಂದು ಪತ್ನಿಗೆ ಹೊಡೆದು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಘಟನೆ ಮೇ 8ರಂದು ರಾತ್ರಿ ವೇಳೆ ನಡೆದಿದೆ.
ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಶುಭಲತಾ ಎಂಬವರ ಪತಿ ದಿನೇಶ ಎಂಬಾತ ಮೇ 8ರಂದು ರಾತ್ರಿ ವಿಪರೀತ ಕುಡಿದು ಮನೆಗೆ ಬಂದು ವಿನಾಃಕಾರಣ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದಿದ್ದನು. ಅದಕ್ಕಾಗಿ ಶುಭಲತಾ ತನ್ನ ಮನೆ ಅಂಪಾರಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ವಾಪಾಸ್ಸು ಮನೆಗೆ ಬಂದು ನೋಡುವಾಗ ದಿನೇಶನು ದ್ವೇಷದಿಂದ ಮನೆಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.
ಇದರಿಂದ ಮನೆಯ ಹಿಂದಿನ ಭಾಗ ಬೆಂಕಿ ತಗುಲಿ ಮರದ ಉಪಕರಣ ಹಾಗೂ ಅಡುಗೆ ಮಾಡುವ ಸಾಮಗ್ರಿಗಳು ಮತ್ತು ಬಟ್ಟೆಗಳು, ಅಡುಗೆ ಆಹಾರ ಪದಾರ್ಥಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಇದರಿಂದ ಒಟ್ಟು 3 ಲಕ್ಷ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.