![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮುಲ್ಕಿ: ಕಿನ್ನಿಗೋಳಿಯ ಬಸ್ ನಿರ್ವಾಹಕರೊಬ್ಬರು ಬಸ್ಸಿನಲ್ಲಿ ಸಿಕ್ಕಿದ ಮಹಿಳೆಯೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾರೆ. ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಸಂಚರಿಸುತ್ತಿದ್ದ ನವದುರ್ಗ ಬಸ್ ನಲ್ಲಿ ಕಟೀಲು ನಿವಾಸಿ ವಾರಿಜಾ ಎಂಬವರ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣಗಳ ಸಣ್ಣ ಬ್ಯಾಗ್ ನಿರ್ವಾಹಕ ಸಂತೋಷ್ ಶೆಟ್ಟಿ ಸಂಕಲಕರಿಯ ಎಂಬವರಿಗೆ ದೊರೆತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅವರು ವಾಟ್ಸಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಚಿನ್ನಾಭರಣ ಕಳೆದುಕೊಂಡ ವಾರೀಸುದಾರರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದರು. ಇತ್ತ ಚಿನ್ನ ಕಳೆದುಕೊಂಡ ಮಹಿಳೆ ವನಜ ರವರು ಕಂಗಾಲಾಗಿ ಕೊನೆಗೂ ಸಾಮಾಜಿಕ ಜಾಲತಾಣದ ಮುಖಾಂತರ ಮಾಹಿತಿ ಪಡೆದು ಬೆಲೆಬಾಳುವ ಚಿನ್ನಾಭರಣ ತಮ್ಮ ಕೈ ಸೇರಿದ್ದು ಖುಷಿಪಟ್ಟರು. ಚಿನ್ನಾಭರಣ ಮಹಿಳೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಬಸ್ ಮಾಲಕ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಕಿನಿಗೊಳಿ ರೋಟರಿ ಕ್ಲಬ್ ನ ಹೆರಿಕ್ ಪಾಯಸ್, ಚಾಲಕ ನಿರ್ವಾಹಕ ಸಂಘದ ಸಂದೀಪ್, ಕರಾಟೆ ಶಿಕ್ಷಕ ಚಂದ್ರಹಾಸ ಅಂಚನ್ ಉಪಸ್ಥಿತರಿದ್ದರು. ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.