ಉಡುಪಿ: ತಂದೆಯು ಮನೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದಾಗ ಎಂಟು ವರ್ಷದ ಪುತ್ರನ ಸಮಯ ಪ್ರಜ್ಞೆಯಿಂದಾಗಿ ತಂದೆಯು ರಕ್ಷಿಸಲ್ಪಟ್ಟ ಘಟನೆ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.
ತಂದೆ ಮತ್ತು ಪುತ್ರ ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ವಾಸವಾಗಿದ್ದರು. ಸೋಮವಾರ ಸಂಜೆ ತಂದೆ ಅಜಯ್ ಕುಸಿದುಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ತತ್ಕ್ಷಣ ತಂದೆಯ ಅಸಹಾಯಕತೆಯನ್ನು ಗಮನಿಸಿದ ಪುತ್ರ ದಿಯಾನ್ ಕತ್ತಲಲ್ಲಿಯೇ ನೆರೆಮನೆಗೆ ಹೋಗಿ ವಿಷಯ ತಿಳಿಸಿದ. ಕೂಡಲೇ ಮನೆಗೆ ಧಾವಿಸಿ ಬಂದ ನೆರೆಮನೆಯವರು ಸತ್ಯಸಂಗತಿ ಅರಿತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ಅವರು ತತ್ಕ್ಷಣ ಸೂಕ್ತ ವ್ಯವಸ್ಥೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಸಮಾಜಸೇವಕಿ ಜ್ಯೋತಿ ನೆರವಿಗೆ ಬಂದಿದ್ದು, ಬಾಲಕ ದಿಯಾನ್ನಿಗೆ ಮನೆಯಲ್ಲಿ ಆಶ್ರಯ ನೀಡಿದ್ದಾರೆ.