
ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಬೊಬ್ಬೆ ಹಾಕುತ್ತಾ, ಕೈಕೈ ಮಿಲಾಯಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಓಡಿಹೋದ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರದ ಕಸಬಾ ಗ್ರಾಮದ ನವೀನ್, ಕೋಡಿ ಕಸಬಾ ಗ್ರಾಮದ ಪ್ರಶಾಂತ್, ಹಂಗಳೂರು ಗ್ರಾಮದ ವಿಘ್ನೇಶ್ ಹಾಗೂ ಕೋಡಿ ಕಸಬಾ ಗ್ರಾಮದ ಗಣೇಶ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಹೋವಿನಟೆಬಲ್ ಮಹೇಶ್, ನಿಶಾಂತ್ ಮತ್ತು ಇತರರ ವಿರುದ್ಧ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಹೋಟೆಲ್ಗಳು
ನಡೆದಿದ್ದೇನು?
ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜಾನಾಯ್ಕ್ ಎನ್. ಅವರು ಸಿಬ್ಬಂದಿಯೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಸುಮಾರು 10:00 ಗಂಟೆಯ ವೇಳೆಗೆ ಕುಂದಾಪುರ ಕಸಬಾ ಗ್ರಾಮದ ಚರ್ಚ್ ರೋಡ್ನಿಂದ ಕೋಡಿಗೆ ಸಂಪರ್ಕಿಸುವ ಸೇತುವೆಯ ಮೇಲೆ ಸಾರ್ವಜನಿಕರು ಗುಂಪುಗೂಡಿದ್ದರು. ಪರಸ್ಪರ ಜೋರಾಗಿ ಬೊಬ್ಬೆ ಹಾಕುತ್ತಾ, ಕೈಕೈ ಮಿಲಾಯಿಸಿ, ಒಬ್ಬರಿಗೊಬ್ಬರು ದೂಡಾಡಿಕೊಳ್ಳುತ್ತಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಉಪನಿರೀಕ್ಷಕರು ಇಲಾಖಾ ಜೀಪ್ ನಿಲ್ಲಿಸಿ, ಸಿಬ್ಬಂದಿ ನೆರವಿನೊಂದಿಗೆ ಗಲಾಟೆ ಮಾಡುತ್ತಿದ್ದವರನ್ನು ಸುತ್ತುವರೆದಿದ್ದಾರೆ.
ಪೊಲೀಸರು ಸ್ಥಳಕ್ಕೆ ದಾಳಿ ಮಾಡುತ್ತಿದ್ದಂತೆ ಗಲಾಟೆಯಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ. ಆದರೆ ಸ್ಥಳದಲ್ಲಿದ್ದ ನಾಲ್ವರನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಓಡಿಹೋದವರ ಬಗ್ಗೆ ವಶಕ್ಕೆ ಪಡೆದ ಆರೋಪಿಗಳನ್ನು ವಿಚಾರಿಸಿದಾಗ ಅವರ ಹೆಸರು ಮಹೇಶ್, ನಿಶಾಂತ್ ಎಂದು ತಿಳಿದುಬಂದಿದೆ. ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 45/2026, ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ: 194(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ
